ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಿಂದಿಸಿದ ಆರೋಪದಲ್ಲಿ ಬಂಧನವಾಗಿ ನಂತರ ಜಾಮೀನು ದೊರೆತು ಬಿಡುಗಡೆಯಾದ ಬಳಿಕ ಚಿಕ್ಕಮಗಳೂರು ನಗರಕ್ಕೆ ಶನಿವಾರ ರಾತ್ರಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.
ತಾಲ್ಲೂಕಿನ ಮಾಗಡಿ ಹ್ಯಾಂಡ್ ಪೋಸ್ಟ್ ಬಳಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ, ಸ್ವಾಗತ ಕೋರಿ ಸಂಭ್ರಮಿಸಿದರು. ಹಿರೇಮಗಳೂರು, ಕೋಟೆ ಸೇರಿ ಅಲ್ಲಲ್ಲಿ ಕಾರ್ಯಕರ್ತರು, ಅಭಿಮಾನಿಗಳು ತಡೆದು ಜೈಕಾರ ಮೊಳಗಿಸಿದರು. ಆಜಾದ್ ಪಾರ್ಕ್ ವೃತ್ತದಲ್ಲಿ ಮಹಿಳಾ ಕಾರ್ಯಕರ್ತರು, ಹೂವುಗಳಿಂದ ಸಿ.ಟಿ.ರವಿ ಅವರ ಹೆಸರು ಬರೆದು ಕಾದಿದ್ದರು. ಬಂದ ಕೂಡಲೇ ಜೈಕಾರ ಮೊಳಗಿಸಿದರು. ಕಾರ್ಯಕರ್ತರು ಜೆಸಿಬಿ ಮೇಲೆ ಹತ್ತಿ ಹೂಮಳೆ ಸುರಿಸಿದರು.
ನಂತರ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಹನುಮಂತಪ್ಪ ವೃತ್ತದಲ್ಲಿ ಬೃಹತ್ ಹೂವಿನ ಹಾರ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು. ಮೆರವಣಿಗೆ ಬರುವ ಮುನ್ನ ದಾರಿಯುದ್ದಕ್ಕೂ ಖಾಸಗಿ ಆಂಬುಲೆನ್ಸ್ಗಳ ಮೂಲಕ ಸೈರನ್ ಮೊಳಗಿಸಲಾಯಿತು. ಮನೆಗೆ ತೆರಳಿದಾಗ ಪತ್ನಿ ಪಲ್ಲವಿ ಅವರು ಆರತಿ ಎತ್ತಿ ಬಳಿಕ ತಬ್ಬಿಕೊಂಡು ಕಣ್ಣೀರಿಟ್ಟರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿ.ಟಿ.ರವಿ, ‘ಹೆದರಿ ಬದುಕುವುದನ್ನು ನನ್ನ ತಾಯಿ ಹೇಳಿಕೊಡಲಿಲ್ಲ. ದುಡಿದ ಬದುಕಲು ಹೇಳಿಕೊಟ್ಟಿದ್ದರು. ಅದರಂತೆ ನಡೆದುಕೊಂಡಿದ್ದೇನೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಯುವ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿ ಹಲವು ಮುಖಂಡರು ಜತೆಯಲ್ಲಿದ್ದರು.


