ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಜಿಲ್ಲಾ ಡಿಸಿಸಿ ಬ್ಯಾಂಕ್ ಮತ್ತು ಅದರ ಇತರೆ 13 ಶಾಖೆಗಳಲ್ಲಿ ವಂಚಕರು ನಕಲಿ ಚಿನ್ನವನ್ನು ನೀಡಿ ಬರೋಬ್ಬರಿ 30.66 ಲಕ್ಷ ರೂ. ಸಾಲವನ್ನು ಪಡೆದಿದ್ರು. ಆ ಮೂಲಕ ಬ್ಯಾಂಕ್ಗೆ ಪಂಗನಾಮ ಹಾಕಿದ್ದರು. ಅವರಲ್ಲಿ ಓರ್ವನನ್ನು ಪೊಲೀಸರು ಬಂದಿಸಿದ್ದರು. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಡಿಸಿಸಿ ಬ್ಯಾಂಕ್, ವೀರಾಜಪೇಟೆ, ಭಾಗಮಂಡಲ, ಕಡಂಗ ಡಿಸಿಸಿ ಬ್ಯಾಂಕ್ ಶಾಖೆ, ಮಡಿಕೇರಿಯ ಮುತ್ತೂಟ್ ಫಿನ್ಕಾರ್ಪ್ ಹಾಗೂ ಭಾಗಮಂಡಲ ವಿಎಸ್ಎಸ್ಎನ್ ಬ್ಯಾಂಕ್ಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ವಿಚಾರಣೆ ಸಂದರ್ಭ ಕೇರಳ ರಾಜ್ಯ ಮಲ್ಲಪುರಂ ಜಿಲ್ಲೆ ನಿವಾಸಿ ನವಾಜ್, 47 ವರ್ಷ ಎಂಬಾತನು ನಕಲಿ ಚಿನ್ನವನ್ನು ನೀಡಿರುವುದು ಕಂಡುಬಂದಿರುತ್ತದೆ.
ತನಿಖೆಯಲ್ಲಿ ಈ ಕೃತ್ಯದ ಮಾಸ್ಟರ್ ಮೈಂಡ್ ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ ಮೊಹಮ್ಮದ್ ಕುಂಞ(48), ಈತನು ಪ್ರದೀಪ್(60) ವರ್ಷ ಎಂಬಾತನಿಗೆ ಹಣವನ್ನು ನೀಡಿ ನಕಲಿ ಚಿನ್ನ ಲೇಪಿತ ಆಭರಣಗಳನ್ನು ತಯಾರಿಸಿರುವುದು ಕಂಡಬಂದಿದೆ.
ಮಾಸ್ಟರ್ ಮೈಂಡ್ ಮೊಹಮ್ಮದ್ ಕುಂಞ ಈತನಿಂದ ಮಧ್ಯವರ್ತಿಯಾದ ನಿಶಾದ್ ಎಂಬಾತನು ನಕಲಿ ಚಿನ್ನವನ್ನು ಪಡೆದು ನವಾಜ್ ಎಂಬಾತನಿಗೆ ನೀಡಿರುವುದು ತನಿಖೆ ಸಂದರ್ಭ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.
ಪ್ರದೀಪ್ ವಿರುದ್ಧ 2024 ನೇ ಸಾಲಿನಲ್ಲಿ 3 ಪ್ರಕರಣಗಳು, ಒಟ್ಟು 15 ಪ್ರಕರಣಗಳು ದಾಖಲಾಗಿರುತ್ತದೆ. ನಿಶಾದ್ ವಿರುದ್ಧ 1 ದರೋಡೆ ಪ್ರಕರಣ, ಒಟ್ಟು 4 ಪ್ರಕರಣಗಳು ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳು ವಿಚಾರಣಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗ ಪಡಿಸಿಕೊಂಡು ವಿಚಾರಣೆ ಮುಗಿಯುವ ವೇಳೆಯಲ್ಲಿ ಜಾಮೀನಿನ ಮೇಲೆ ಹೊರಗೆ ಬಂದು ಮತ್ತೆ ಇದೇ ರೀತಿಯ ಕೃತ್ಯದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಾಯ್ದೆಯ ಕಲಂ: 111 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಇಂತಹ ಕೃತ್ಯ ನಡೆಸಿದ ಆರೋಪಿಗಳಿಗೆ ಜಾಮೀನು ನೀಡದಂತೆ ಘನ ನ್ಯಾಯಾಲಯಕ್ಕೆ ಆಕ್ಷೇಪಣೆಯನ್ನು ಸಲ್ಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹೇಳಿದರು.

ಮಡಿಕೇರಿ ನಗರ, ವಿರಾಜಪೇಟೆ ನಗರ, ಭಾಗಮಂಡಲ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮಡಿಕೇರಿ ಉಪವಿಭಾಗ ಡಿಎಸ್ಪಿ ಮಹೇಶ್ ಕುಮಾರ್, ಸೆನ್ ಪೊಲೀಸ್ ಠಾಣೆ ಡಿಎಸ್ ಪಿ ರವಿ, ಮಡಿಕೇರಿ ನಗರ ವೃತ್ತ ಸಿಪಿಐ ರಾಜು.ಪಿ.ಕೆ, ಮಡಿಕೇರಿ ಗ್ರಾಮಾಂತರ ವೃತ್ತ ಸಿಪಿಐ, ಅನೂಪ್ ಮಾದಪ್ಪ.ಪಿ, ಡಿಸಿಆರ್.ಬಿ ಪಿಐ ಮೇದಪ್ಪ, ಮಡಿಕೇರಿ ನಗರ ಪ್ರೊ.ಠಾ ಪಿಎಸ್ಐ ಲೋಕೇಶ್, ಭಾಗಮಂಡಲ ಪೊ.ಠಾ ಪಿಎಸ್ಐ ಶೋಭಾ ಲಾಮಣಿ, ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿ, ಡಿಸಿಆರ್ಬಿ ಮತ್ತು ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು.
ಮೊಹಮ್ಮದ್ ರಿಜ್ವಾನ್, ನವಾಜ್, ಮೊಹಮ್ಮದ್ ಕುಂಞ, ಪ್ರದೀಪ್, ನಿಶಾದ್, ಕೆ.ಪಿ. ನವಾಜ್, ಪಿ.ಹೆಚ್. ರಿಯಾಜ್, ಕುಂಜಿಲದ ಅಬ್ದುಲ್ ನಾಸಿರ್, ಪಡಿಯಾನಿಯ ಬಿ.ಎ. ಮೂಸಾ, ಎಂ.ಎಂ. ಮಹಮ್ಮದ್ ಹನೀಫ್, ಖತೀಜಾ, ಭಾಗಮಂಡಲ ಅಯ್ಯಂಗೇರಿಯ ರ್ಹಾನ್, ರಫೀಕ್ ಬಂಧಿತರು. ಮತ್ತೋರ್ವ ಆರೋಪಿ ಹಂಸ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಸೆರೆಗೂ ಬಲೆ ಬೀಸಲಾಗಿದೆ.



