ಉನ್ನತ ಸಾಧನೆ ಮಾಡಲು ಗುರಿ ಇಟ್ಟುಕೊಳ್ಳುವ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು ಪ್ರೋತ್ಸಾಹ ಹಾಗೂ ಸಹಕಾರ ನೀಡಿದರೆ ಆ ವಿದ್ಯಾರ್ಥಿ ತನ್ನ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಮೂಡಿಗೆರೆ ಉಪ ನೊಂದಣಾಧಿಕಾರಿ ಪಿ.ಎಸ್.ನಾರಾಯಣ ಭಂಡಾರಿ ಹೇಳಿದರು.
ಅವರು ಸೋಮವಾರ ಮೂಡಿಗೆರೆ ಪಟ್ಟಣದ ಭಂಡಾರಿ ಕಚೇರಿಯಲ್ಲಿ ಭಂಡಾರಿ ಸಮಾಜ ಏರ್ಪಡಿಸಿದ್ದ ವಿದ್ಯಾರ್ಥಿವೇತನಾ ವಿತರಣೆ ಕಾರ್ಯಕ್ರಮದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿರುವ ತಾಲೂಕಿನ ನಿಡುವಾಳೆ ಗ್ರಾಮದ ಸಂಜನ ವಾಸು ಭಂಡಾರಿ ಅವರಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಿ ಮಾತನಾಡಿದರು.
ಬೆಂಗಳೂರಿನ ಭಂಡಾರಿ ಸಮಾಜ ಪ್ರತಿ ವರ್ಷ ಎಲ್ಲಾ ತಾಲೂಕಿನ ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಶ್ಲಾಘನೀಯ. ಇದರಿಂದ ರಾಜ್ಯದ ಎಷ್ಟೋ ಮಂದಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗ ಮಾಡಲು ಸಹಾಯವಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.
ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಎಂ.ಕೆ.ಷಣ್ಮುಖಾನಂದ, ಕಾರ್ಯದರ್ಶಿ ಕೆ.ಎಸ್.ನಾಗೇಶ್ ಭಂಡಾರಿ, ವನಿತಾ ಎಸ್.ಭಂಡಾರಿ ಉಪಸ್ಥಿತರಿದ್ದರು.



