ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಕಡವೆ ಮರಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಸಗೋಡು ಗ್ರಾಮದಲ್ಲಿ ನಡೆದಿದೆ.
ಹೆಸಗೋಡು ಗ್ರಾಮ ಕಾಂಡಂಚಿನ ಗ್ರಾಮ. ಕಾಡಿನ ಪಕ್ಕದಲ್ಲೇ ಇದ್ದು ಕಾಡುಹಂದಿ, ಕಡವೆ, ಕಾಡುಕುರಿ ಸೇರಿ ಅನೇಕ ಪ್ರಾಣಿಗಳು ಕಾಡಂಚಿನಲ್ಲೇ ಇರುತ್ತವೆ. ಆದರೆ, ಕಡವೆಯ ಮರಿಯೊಂದು ನೀರು ಹುಡುಕಿಕೊಂಡು ಹೆಸಗೋಡು ಗ್ರಾಮಕ್ಕೆ ಬಂದಿತ್ತು. ನೀರು ಕುಡಿಯುವ ವೇಳೆ ಕಂಡ ಬೀದಿನಾಯಿಗಳು ಕಡವೆ ಮರಿ ಮೇಲೆ ದಾಳಿಮಾಡಿ ಅಟ್ಟಿಸಿಕೊಂಡು ಹೋಗಿ ಕಚ್ಚಿದ್ದವು. ಆದರೆ, ಬೀದಿನಾಯಿಗಳಿಂದ ತಪ್ಪಿಸಿಕೊಂಡು ಕಡವೆ ಕಾಫಿತೋಟದ ಮರವೊಂದರ ಬಳಿ ಗಾಬರಿಯಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು.

ಬೀದಿ ನಾಯಿಗಳು ಕಡವೆ ಮರಿಯನ್ನ ಅಟ್ಟಿಸಿಕೊಂಡು ಹೋಗಿದ್ದನ್ನ ಕಂಡ ಸ್ಥಳಿಯರು ಹಾಗೂ ಗುತ್ತಿ ದೇವರಮನೆ ಗ್ರಾಮದ ಅಕ್ಷತಾ ಮದನ್ ದಂಪತಿಗಳು ಕೂಡ ಹಿಂದೆಯೇ ಹೋಗಿ ಬೀದಿ ನಾಯಿಗಳಿಂದ ಕಡವೆ ಮರಿಯನ್ನ ರಕ್ಷಿಸಿದ್ದಾರೆ. ತೋಟದಲ್ಲೇ ಅದಕ್ಕೆ ನೀರು ಕುಡಿಸಿ, ಸಂತೈಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಕಡವೆ ಮರಿಯನ್ನ ಜೀಪಿನಲ್ಲಿ ಕರೆದೊಯ್ದು ಪುನಃ ಅರಣ್ಯಕ್ಕೆ ಬಿಟ್ಟಿದ್ದಾರೆ.



