ಟ್ಯಾಕ್ಸಿ ಮತ್ತಿತರ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಜೀವದ ಜವಾಬ್ದಾರಿ ಚಾಲಕನ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ಎಲ್ಲರು ಚಾಚು ತಪ್ಪದೆ ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಸರ್ಜನ್ ಡಾ.ಮೋಹನ್ಕುಮಾರ್ ಹೇಳಿದರು.
ಜಿಲ್ಲಾಡಳಿತ, ಸಾರಿಗೆ ಇಲಾಖೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಗರದ ಸರಕಾರಿ ನೌಕರರ ಭವನದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಇಂದು ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಲಕರಲ್ಲಿ ಬಿಡುವಿನ ವೇಳೆ ಒಂದಷ್ಟು ಸಮಯ ಸಿಗುತ್ತದೆ. ಆ ವೇಳೆ. ಪಾನ್, ಟೊಬೆಕೋ, ಬೀಡಿ ಸಿಗರೇಟ್, ಮದ್ಯಪಾನದಂತಹ ಹವ್ಯಾಸಗಳನ್ನು ಬಿಟ್ಟು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪ್ರತಿ ಕಾಯಿಲೆಗಳಿಗೆ ಔಷಧಗಳು ಬಂದಿರಬಹುದು. ಆದರೆ, ಅಪಘಾತ ತಡೆಗಟ್ಟಲು ಸದಾ ಎಚ್ಚರವಾಗಿರುವುದೇ ಮದ್ದು. ಕೆಟ್ಟ ಹವ್ಯಾಸಗಳ ಜತೆ ಮೊಬೈಲ್ ಬಳಕೆ ಕಡಿಮೆ ಮಾಡಿದಲ್ಲಿ ಹಲವು ಅಪಘಾತ ತಡೆಯಬಹುದು ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್ಕುಮಾರ್ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡುತ್ತಿದೆ ಎಂದರು.
ರೋಟರಿ ಕ್ಲಬ್ನ ರಾಜ್ಕುಮಾರ್ ಮಾತನಾಡಿ, ರೋಟರಿ ವಿಶ್ವದಾದ್ಯಂತ ಇರುವ ಸಂಸ್ಥೆ. ಸೇವಾ ಮನೋಭಾವನೆಯಿಂದ ಪಲ್ಸ್ ಪೊಲೀಯೋ ಮತ್ತಿತರೆ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಆರ್.ಅನಿಲ್ಕುಮಾರ್ ಮಾತನಾಡಿ, ರಕ್ತದಾನದಲ್ಲಿ ಮೊದಲಿಗರು ಅಂತ ಇದ್ದರೆ ಅದು ಆಟೋ ಮತ್ತು ಟ್ಯಾಕ್ಸಿ ಚಾಲಕರು ಎಂದು ಹೇಳಬಹುದು. ಚಾಲಕರು ಮದ್ಯಪಾನ, ಧೂಮಪಾನಕ್ಕೆ ಬಲಿಯಾಗದೆ ಸ್ವಚ್ಛವಾಗಿರಬೇಕು. ಸ್ಟೇರಿಂಗ್ ಹಿಡಿಯಬೇಕಾದರೆ ತಮ್ಮ ಕುಟುಂಬವನ್ನು ನೆನಪಿಸಿಕೊಂಡು ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.
ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಓರ್ವ ಪ್ರಚಾರ್ಯರು 62 ಬಾರಿ ರಕ್ತದಾನ ಮಾಡಿದ್ದಾರೆ ಅವರೇ ನಾಗರಾಜ್ ಎಂದು ಹೇಳಿದರು. ಇಂತಹ ಪುಣ್ಯಾತ್ಮರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ. ಆರೋಗ್ಯ ತಪಾಸಣೆ ಉತ್ತಮವಾದ ಕಾರ್ಯಕ್ರಮ ಎಂದರು. ರಕ್ತನಿಧಿ ಕೇಂದ್ರದ ಡಾ.ಮುರುಳೀಧರ್, ಡಾ.ಹಂಸ, ಡಾ.ಸುಜಿತ್, ಆಟೋ ಸಂಘದ ಅಧ್ಯಕ್ಷ ರಾಮೇಗೌಡ, ವಿನಾಯಕ ಮತ್ತಿತರರಿದ್ದರು.



