ತಾನು ಶಾಸಕರಾದ ಬಳಿಕ 100 ಕೋಟಿಗೂ ಹೆಚ್ಚು ಅನುದಾನ ಬಳಸಿ ಕ್ಷೇತ್ರದಲ್ಲಿ ರಸ್ತೆ, ಶಾಲೆ, ಅಂಗನವಾಡಿ, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ನಡೆಸಲಾಗಿದೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಗೋಣಿಬೀಡಿನಲ್ಲಿ 18.84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ನಾಡ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಕ್ಷೇತ್ರದ ವಿವಿಧಡೆ ಸೇತುವೆ ನಿರ್ಮಾಣಕ್ಕಾಗಿ 50 ಕೋಟಿ ರೂ. ಅನುದಾನ ತಂದಿದ್ದೇನೆ. ಅದರಲ್ಲಿ ಕಗ್ಗನಹಳ್ಳ ಸೇತುವೆಗೆ 27 ಕೋಟಿ ರೂ. ಬಳಸಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಉಳಿದಂತೆ ಕಳಸ, ಆಲ್ದೂರು, ಅಂಬಳೆ, ದೇವರುಂದ ಗ್ರಾಮಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.10 ಕೋಟಿ ವೆಚ್ಚದಲ್ಲಿ ಗೋಣಿಬೀಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. 25 ಕೋಟಿ ರೂ. ಅನುದಾನ ಬಳಸಿ ಕ್ಷೇತ್ರದಲ್ಲಿ 126 ರಸ್ತೆಗಳನ್ನು ಅಭಿವೃದ್ಧಿಪಡಿಸಲು 17 ಕೋಟಿ ಬಳಸಲಾಗಿದೆ. ಉಳಿದ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಶಾಸಕರ ಎರಡು ವರ್ಷದ ನಿಧಿ ಬಳಸಿ ದೇವಸ್ಥಾನ, ಶಾಲೆ, ಅಂಗನವಾಡಿ, ಸಮುದಾಯ ಭವನ ಮತ್ತು ಕ್ಷೇತ್ರದ ವಿವಿಧ ಕಡೆ ಆಶ್ರಯ ನಿವೇಶನಗಳ ಅಭಿವೃದ್ಧಿ ಹಾಗೂ ಆಲ್ದೂರಿನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಗ್ಯಾರೆಂಟಿ ಯೋಜನೆಯ ಹಣ ಬಳಸಿಕೊಳ್ಳುತ್ತಿರುವ ಮಹಿಳೆಯಾರಿಂದಾಗಿ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿರುವುದು ಕಂಡುಬರುತ್ತದೆ. ಗ್ಯಾರೆಂಟಿ ಯೋಜನೆಗೆ ಸರ್ಕಾರ ಹಣ ಖರ್ಚು ಮಾಡುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿಲ್ಲ. ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವಿಪಕ್ಷಗಳ ಮುಖಂಡರ ಹೇಳಿಕೆಯಲ್ಲಿ ಹುರುಳಿಲ್ಲ. ಪ್ರಚಾರಕ್ಕೋಸ್ಕರ ಅಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ಅಂತಹ ಸುಳ್ಳು ಹೇಳಿಕೆಯನ್ನು ಜನ ನಂಬಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಮಹಾಪೂರವೆ ಹರಿಯುತ್ತಿದೆ. ಅದನ್ನು ಸಹಿಸದ ವಿಪಕ್ಷದ ನಾಯಕರು ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ದೇವಡಿ ಮಾಡಿದರು.
ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ರಾಧಾ ಮಿದ್ರೇಶ್, ಜುಬೇದ, ಸುಮಿತ್ರಾ, ಆನಂದ, ಸುಧಾಮಣಿ, ಕೃಷ್ಣಪ್ಪ, ತಹಸೀಲ್ದಾರ್ ರಾಜಶೇಖರ್ ಮೂರ್ತಿ, ಉಪತಹಸಿಲ್ದಾರ್ ವೀಣಾಂಭ, ಕಂದಾಯ ನಿರೀಕ್ಷಕ ಮಂಜುನಾಥ್, ಪಿಎಸ್ಐ ಹರ್ಷವರ್ಧನ್, ಗ್ರಾಪಂ ಕಾರ್ಯದರ್ಶಿ ನಜೀರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಟಿ.ಜಗದೀಶ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ, ಮುಖಂಡರಾದ ಜಕಾವುಲ್ಲಾ, ಮುನಾವರ್ ಪಾಷ, ಶೇಷೆಗೌಡ ಇತರರಿದ್ದರು.
22 ಸದಸ್ಯರಿರುವ ಗೋಣಿಬೀಡು ಗ್ರಾಪಂನಲ್ಲಿ ಕಳೆದ 2 ವರ್ಷದಿಂದ ಪಿಡಿಒ ಮತ್ತು ಕಾರ್ಯದರ್ಶಿ, ಹುದ್ದೆ ಖಾಲಿ ಉಳಿದಿದೆ. ಬಿ.ಹೊಸಳ್ಳಿ ಗ್ರಾಪಂ ಪಿಡಿಒ ಸಿಂಚನ ಅವರನ್ನು ವಾರದಲ್ಲಿ ದಿನ, ಅದೇ ಗ್ರಾಪಂ ಕಾರ್ಯದರ್ಶಿ ನಜೀರ್ ಅವರನ್ನು ವಾರದಲ್ಲಿ 3 ದಿನ ಗೋಣಿಬೀಡು ಗ್ರಾಪಂಗೆ ನೇಮಿಸಲಾಗಿದೆ. ಇಷ್ಟು ದೊಡ್ಡ ಗ್ರಾಪಂನಲ್ಲಿ ಅಧಿಕಾರಿಗಳಿಲ್ಲದೆ ಸಾರ್ವಜನಿಕರ ಕೆಲಸ ನನೆಗೂದಿಗೆ ಬೀಳುತ್ತಿದೆ. ಇ ಸ್ವತ್ತು ಮಾಡಲು ಪಿಡಿಒ ಅಗತ್ಯವಿದೆ. ಕೂಡಲೆ ಖಾಯಂ ಪಿಡಿಒ ಮತ್ತು ಕಾರ್ಯದರ್ಶಿಯನ್ನು ನೇಮಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್ ಮತ್ತು ಸದಸ್ಯರು ಒಕ್ಕೋರಲ್ಲಿನಿಂದ ಶಾಸಕಿ ನಯನಾ ಮೋಟಮ್ಮ ಅವರನ್ನು ಒತ್ತಾಯಿಸಿದರು.



