ಗ್ಯಾರಂಟಿ ಯೋಜನೆ ಜತೆಗೆ ರೈತರ, ಕಾರ್ಮಿಕರ ರಕ್ಷಣೆ ಮಾಡುವಂತಹ ಐತಿಹಾಸಿಕ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಮಾಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಫಿ ಬೆಳಗಾರರ ಪರವಾಗಿ ನಿರಂತರವಾಗಿ ಕಾಂಗ್ರೆಸ್ ಸರಕಾರ ನಿಂತಿದೆ. ಹಾಗಾಗಿ ಈ ಹಿಂದೆ ವಿದರ್ಭ ಪ್ಯಾಕೇಜ್, 72 ಸಾವಿರ ಕೋಟಿ ರೂ ಸಣ್ಣ ಬೆಳೆಗಾರರ ಸಾಲ ಮನ್ನಾ ಮಾಡಿರುವ ಜತೆಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುತ್ತಾ ಬಂದಿದೆ. ಇದೀಗ ಕಾಫಿಗೆ ಉತ್ತಮ ಬೆಲೆಯಾಗಿದ್ದರಿಂದ ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿಸುವ ಸನ್ನಿವೇಶ ಎದುರಾಗಿದೆ. ಅಲ್ಲದೇ ಭೂಮಿ ಗುತ್ತಿಗೆ ನೀಡುವ ಬಗ್ಗೆ ಐತಿಹಾಸಿಕ ಕಾನೂನು ಜಾರಿ ಮಾಡಲು ಹೊರಟಿದ್ದರಿಂದ ಬೆಳೆಗಾರರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ನಮ್ಮ ಸರಕಾರ ರಾಜ್ಯದಲ್ಲಿ ಉತ್ತಮ ಜನಪರವಾದ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ. ಇದರ ನಡುವೆ ಗ್ಯಾರಂಟಿ ಯೋಜನೆಯಿಂದ ಕಡು ಬಡವರು, ನಿರುದ್ಯೋಗಿಗಳಿಗೆ ಅತ್ಯಂತ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಯಾವುದೇ ತೊಡಕುಂಟಾಗುತ್ತಿಲ್ಲ. ಅಲ್ಲದೇ ಜಿಲ್ಲೆಯಲ್ಲಿರುವ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಅದರಂತೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಕೂಡ ತಾಲೂಕಿನಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಾಣಿ ಮತ್ತು ಮಾನವನ ಮೇಲೆ ನಡೆಯುತ್ತಿರುವ ಸಂಘರ್ಷ ಅಧಿಕಗೊಂಡಿದೆ. ಇದನ್ನು ತಡೆಗಟ್ಟಲು ರಾಜ್ಯ ಸರಕಾರದ ಜತೆಗೆ ಕೇಂದ್ರ ಸರಕಾರ ಕೈ ಜೋಡಿಸಬೇಕಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ರಮೇಶ್ ಪಟೇಲ್ ಉಪಸ್ಥಿತರಿದ್ದರು.



