ಎಲ್ಲಾ ಧರ್ಮದ ತುಳು ಭಾಷಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಲುವಾಗಿ 16 ನೇ ವರ್ಷದ ತುಳು ವೈಭವೋ ಕಾರ್ಯಕ್ರಮವನ್ನು ಪಟ್ಟಣದ ಅಡ್ಯಂತಾಯ ರಂಗಮಂದಿರ ಹಾಗೂ ಫ್ರೆಂಡ್ಸ್ ಬಾಲ್ ಬ್ಯಾಡ್ಮಿಟನ್ ಅಸೋಸಿಯೇಷನ್ ಆವರಣದಲ್ಲಿ ಫೆ.21ರಂದು ಸಂಜೆ 5.45 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ತುಳುಕೂಟದ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ಪಟ್ಟಣದಲ್ಲಿ ತುಳು ವೈಭವೋ ಕಾರ್ಯಕ್ರಮದ ಕರಪತ್ರಿಕೆ ಬಿಡುಗಡೆಗೊಳಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 15 ವರ್ಷದಿಂದ ಮಲೆನಾಡಿನಲ್ಲಿ ವಾಸವಿರುವ ಎಲ್ಲಾ ಧರ್ಮೀಯ ತುಳು ಭಾಷಿಗರು ಒಂದೆಡೆ ಸೇರಿ ತುಳುಕೂಟ ರಚಿಸಿ, ಪ್ರತಿ ವರ್ಷ ತುಳು ವೈಭವೋ ಕಾರ್ಯಕ್ರಮವನ್ನು ಅದ್ದೂರಿಗಾಗಿ ನಡೆಸಿಕೊಂಡು ಬರಲಾಗಿದೆ. ಅದರಂತೆ ಈ ವರ್ಷವೂ 16 ನೇ ವರ್ಷದಿಂದ ತುಳು ವೈಭವೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.
ಅಂದು ಸಂಜೆ 5.45 ಗಂಟೆಗೆ ನಡೆಯುವ ತುಳು ವೈಭವೋ ಕಾರ್ಯಕ್ರಮವನ್ನು ಮಂಗಳೂರಿನ ಚಿರಾಯು ಆಯುರ್ವೇದ ಕ್ಲಿನಿಕ್ನ ಡಾ.ಆಶಾ ಜ್ಯೋತಿ ರೈ ಉದ್ಘಾಟಿಸಲಿದ್ದಾರೆ. ಸಭೆ ಅಧ್ಯಕ್ಷತೆ ಶಾಸಕಿ ನಯನಾ ಮೋಟಮ್ಮ ವಹಿಸಲಿದ್ದಾರೆ. ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕೋಟಾ ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಮಂಗಳೂರಿನ ತುಳು ಅಕಾಡೆಮಿ ಆಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಚಿಕ್ಕಮಗಳೂರು ಸಂತ ಜೋಸೆಫರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಂ.ಸ್ವಾಮಿ ಮಾರ್ಷಲ್ ಪಿಂಟೋ, ಮಂಗಳೂರಿನ ಖ್ಯಾತ ವಾಗ್ಮಿ ಮಹಮ್ಮದ್ ರಪೀಕ್ ಆಗಮಿಸಿಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ನಂತರ ಬೇಲೂರಿನ ಚೈತನ್ಯ ಕಲಾವಿದರಿಂದ ಅಷ್ಟಮಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ. ಎಲ್ಲಾ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ನಿರ್ದೇಶಕ ಜಾನಪ್ಪ ಮಾಸ್ತರ್, ಕಾರ್ಯದರ್ಶಿ ಎಂ.ಎಸ್. ಗೋಪಾಲಶೆಟ್ಟಿ, ಹಸೇನರ್, ಶಿಹಾಬುದ್ದೀನ್, ಸುಂದರ್ ಉಪಸ್ಥಿತರಿದ್ದರು.



