ಕಾಫಿ ತುಂಬಿದ್ದ ಲಾರಿ ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಶೃಂಗೇರಿ ತಾಲೂಕು ಪಂಚಾಯ್ತಿ ಇ.ಓ ಸೇರಿ ಇಬ್ಬರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕಾಫಿ ಸಾಗಿಸುತ್ತಿದ್ದ ಲಾರಿ ಅಡ್ಡಗಟ್ಟಿ 50 ಸಾವಿರಕ್ಕೆ ಬೇಡಿಕೆ ಇಡಲಾಗಿದೆ ಎಂಬ ಆರೋಪ ಇವರ ಮೇಲಿದೆ.
ಹೇರೂರಿನಿಂದ ಚಿಕ್ಕಮಗಳೂರಿಗೆ ಕಾಫಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ತಡೆದು ಹಣದ ಬೇಡಿಕೆ ಹಿನ್ನಲೆಯಲ್ಲಿ ಶೃಂಗೇರಿ ತಾಲ್ಲೂಕು ಪಂಚಾಯಿತಿ ಇ.ಓ ಸುದೀಪ್, ಮೆಣಸೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜು ಮೇಲೆ ಕೇಸ್ ದಾಖಲಾಗಿದೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 126(2), 115(2), 351,352 ಸೆಕ್ಷನ್ ಅಡಿ FIR ಮಾಡಿ ಇಬ್ಬರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಸರ್ಕಾರಿ ವಾಹನದಲ್ಲಿ ಬಂದು ಕಾಫಿ ತುಂಬಿದ್ದ ಲಾರಿ ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಟ್ಟು ಹಲ್ಲೆ ಮಾಡಿರುವ ಆರೋಪವೂ ಇವರ ಮೇಲಿದೆ. ಇವರು ಲಾರಿ ಅಡ್ಡಗಟ್ಟಿ ಲಾರಿಯಲ್ಲಿದ್ದವರೊಂದಿಗೆ ವಾಗ್ವಾದ ನಡೆಸುತ್ತಿರುವ ಮತ್ತು ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಪ್ರಶ್ನೆ ಮಾಡಿದ್ದ ಹೇರೂರು ಗ್ರಾಮ ಪಂಚಾಯ್ತಿ ಸದಸ್ಯ ಅಮ್ಜದ್ ಮೇಲೆಯೂ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ಅಮ್ಜದ್ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರಿಗೆ ಗ್ರಾಮದ ಬಳಿ ಘಟನೆ ನಡೆದಿದೆ. ಜವಾಬ್ದಾರಿಯುತ ಅಧಿಕಾರಿಯ ವರ್ತನೆ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ.



