ರಾಜ್ಯದ ಕಾಫಿ ಕಣಿವೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ದಾಳಿಗೆ ಯುವಕ ಬಲಿಯಾಗಿದ್ದಾನೆ.
ಬೇಲೂರು ತಾಲ್ಲೂಕಿನ ಅರೆಹಳ್ಳಿ ಠಾಣಾ ವ್ಯಾಪ್ತಿಯ ಬ್ಯಾದನೆ ಗ್ರಾಮದಲ್ಲಿ ಘಟನೆ ನಡೆದಿದೆ, ಅನಿಲ್ (28) ಎಂಬ ಯುವಕ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಬ್ಯಾದನೆ ಗ್ರಾಮದ ಅಣ್ಣಮಲೈ ಎಸ್ಟೇಟ್ಗೆ ಕೆಲಸಕ್ಕೆ ಬಂದಿದ್ದ ಗುಜನಹಳ್ಳಿ ಗ್ರಾಮದ ಅನಿಲ್ ಕೆಲಸ ಮುಗಿಸಿ ಮನೆಗೆ ತೆರಳುವಾಗ ದಾಳಿ ಮಾಡಿದ ಕಾಡಾನೆ ಸೊಂಡಲಿನಿಂದ ಎತ್ತಿ ಬಿಸಾಡಿ, ತುಳಿದು ಸಾಯಿಸಿದೆ. ಸ್ಥಳದಲ್ಲಿ ಮೃತ ಯುವಕನ ಪೋಷಕರ ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇವತ್ತು ಬೇಲೂರು ಬೆಳೆಗಾರರ ಸಂಘದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಾಸನ, ಸಕಲೇಶಪುರ, ಬೇಲೂರು ಭಾಗದ ಶಾಸಕರು, ಅರಣ್ಯ ಅಧಿಕಾರಿಗಳ ಮತ್ತು ಬೆಳೆಗಾರರ ಸಂಘಟನೆ, ರೈತ ಸಂಘಟನೆಗಳ ಸಭೆ ನಡೆದಿತ್ತು. ಉದ್ದೇಶಿತ ಆನೆ ಕಾರಿಡಾರ್, ಆನೆ ದಾಮ ಸ್ಥಾಪನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಸಭೆ ನಡೆದ ಸ್ವಲ್ಪ ಸಮಯದಲ್ಲೇ ಇತ್ತ ಮತ್ತೊಂದು ಜೀವ ಕಾಡಾನೆ ದಾಳಿಗೆ ಬಲಿಯಾಗಿದೆ.
ಬೇಲೂರು ಸಕಲೇಶಪುರ, ಆಲೂರು, ಮೂಡಿಗೆರೆ, ಎನ್.ಆರ್.ಪುರ, ಚಿಕ್ಕಮಗಳೂರು ಮುಂತಾದ ಕಡೆ ಕಾಡಾನೆ ದಾಳಿ ಮಿತಿಮೀರಿದೆ. ವಾರಕ್ಕೊಂದು ಜೀವ ಕಾಡಾನೆ ದಾಳಿಗೆ ಬಲಿಯಾಗುತ್ತಿದ್ದು, ಮಲೆನಾಡಿನ ಜನರು ಇದರಿಂದ ರೋಸಿ ಹೋಗಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರ ಪರಿಗಣಿಸಿ ಕಾಡಾನೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ವಹಿಸಬೇಕಾಗಿದೆ.



