ಕಾಫಿ ತೋಟದಲ್ಲಿ ಕಾಳುಮೆಣಸು ಕೊಯ್ಯುತ್ತಿದ್ದ ವೇಳೆ ಅಸ್ಸಾಂ ಮೂಲದ ಕಾರ್ಮಿಕರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೇಲೂರು ತಾಲ್ಲೂಕಿನ ಅರೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಿಕ್ಕೋಡು ಬಳಿಯ ಇರಕರವಲ್ಲಿ ಗ್ರಾಮದ ಇಕ್ಬಾಲ್ ಎಂಬುವವರ ಕಾಫಿ ಎಸ್ಟೇಟ್ ನಲ್ಲಿ ಈ ದುರ್ಘಟನೆ ನಡೆದಿದೆ. 20 ವರ್ಷದ ಫಾರೂಕ್ ಎಂಬ ಯುವಕ ಕಾಳುಮೆಣಸು ಕೊಯ್ಯುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಇಕ್ಬಾಲ್ ಅವರ ತೋಟದಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ತಂಡ ಕಾಳುಮೆಣಸು ಕೊಯ್ಯುತ್ತಿದ್ದರು. ಸಂಜೆ ಎಲ್ಲಾ ಕಾರ್ಮಿಕರು ಕಣಕ್ಕೆ ವಾಪಾಸ್ಸಾದರೂ ಫಾರೂಕ್ ಮಾತ್ರ ಕಣಕ್ಕೆ ಬಂದಿರಲಿಲ್ಲ. ನಂತರ ತೋಟದಲ್ಲಿ ಹುಡುಕಾಟ ನಡೆಸಿದಾಗ ಫಾರೂಕ್ ಮರದ ಬುಡದಲ್ಲಿ ಅಂಗಾತ ಬಿದ್ದಿರುವುದು ಪತ್ತೆಯಾಗಿತ್ತು. ಪರಿಶೀಲಿಸಿದಾಗ ಫಾರೂಕ್ ಅವರ ಉಸಿರು ನಿಂತಿತ್ತು.
ಫಾರೂಕ್ ಮೆಣಸು ಕೊಯ್ಯುವಾಗ ಮರದಿಂದ ಬಿದ್ದು ಸಾವನ್ನಪ್ಪಿದ್ದಾರಾ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರಬಹುದಾ ಎಂಬುದು ಅನುಮಾನಾಸ್ಪದವಾಗಿದೆ.
ಬೇಲೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



