ಅಪ್ರಾಪ್ತ ಬಾಲಕನಿಗೆ ಸ್ಕೂಟಿ ಚಾಲನೆ ಮಾಡಲು ನೀಡಿದ ವಾಹನ ಮಾಲೀಕನಿಗೆ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲಯ ಸ್ಕೂಟಿ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದೆ.
ದಿನಾಂಕ 4-4-2025ರಂದು ಮೂಡಿಗೆರೆ ಪಟ್ಟಣದಲ್ಲಿ ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರ ಸಮ್ಮುಖದಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಅಪ್ರಾಪ್ತ ಬಾಲಕನೋರ್ವ ಕೆಎ 18, ಇಸಿ 2707 ನಂಬರಿನ ಸ್ಕೂಟಿಯನ್ನು ಚಾಲನೆ ಮಾಡುತ್ತಿದ್ದುದು ಪರಿಶೀಲನೆಯಿಂದ ತಿಳಿದುಬಂದಿತ್ತು.
ದಾಖಲೆಗಳನ್ನು ಪರಿಶೀಲಿಸಿದಾಗ ಸ್ಕೂಟಿಯು ಬಾಪುನಗರ ವಾಸಿ ಮಹಮ್ಮದ್ ಸಿರಾಜ್ ಎಂಬುವವರು ಸೇರಿದ್ದು ಎಂದು ತಿಳಿದುಬಂದಿತ್ತು.
ಅಪ್ರಾಪ್ತನಿಗೆ ವಾಹನ ಚಾಲನೆ ಮಾಡಲು ನೀಡಿದ ಆರೋಪದಲ್ಲಿ ವಾಹನ ಮಾಲೀಕ ಮಹಮ್ಮದ್ ಸಿರಾಜ್ ವಿರುದ್ಧ ಕೇಸು ದಾಖಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲದ ನ್ಯಾಯಾದೀಶರು ದಿನಾಂಕ 15-04-2025ರಂದು ವಾಹನ ಮಾಲೀಕ ಮಹಮ್ಮದ್ ಸಿರಾಜ್ ಅವರಿಗೆ 25 ಸಾವಿರ ದಂಡ ಹಾಕಿದ್ದಾರೆ.
ಇತ್ತೀಚೆಗೆ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಅದರಲ್ಲೂ ದ್ವಿಚಕ್ರ ವಾಹನ ಚಾಲನೆ ಮಾಡುವುದು ಹೆಚ್ಚುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಇದೀಗ ಮೂಡಿಗೆರೆ ನ್ಯಾಯಾಲಯ ನೀಡಿರುವ ತೀರ್ಪು ವಾಹನ ಮಾಲೀಕರಿಗೆ ಒಂದು ಪಾಠವಾಗಿದೆ.



