ಪಾಕ್ ವಿರುದ್ಧ ಭಾರತ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಗಾಯಗೊಂಡು, ರಜೆಯ ಮೇಲೆ ಹುಟ್ಟೂರಿಗೆ ಆಗಮಿಸಿದ ವೀರ ಯೋಧನನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

ಕಳಸ ತಾಲೂಕಿನ ಹಳ್ಳುವಳ್ಳಿಯ ಯೋಧ ರಾಜಪ್ಪ ಅವರು ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ, ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ವೈದ್ಯಕೀಯ ರಜೆಯ ಮೇರೆಗೆ ಹುಟ್ಟೂರಿಗೆ ಆಗಮಿಸಿದ್ದಾರೆ. ಅವರು ಊರಿಗೆ ಬಂದಿಳಿಯುತ್ತಿದ್ದಂತೆ ಕಳಸ ಪಟ್ಟಣದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನ ಮಾಡಿದ್ದಾರೆ. ಸ್ಥಳೀಯರು ಕಳಸ ಪಟ್ಟಣದಲ್ಲಿ ಯೋಧನನ್ನ ಮೆರವಣಿಗೆಯಲ್ಲಿ ಕರೆದೊಯ್ದಿದ್ದಾರೆ.
ಹುಟ್ಟೂರ ಯೋಧನಿಗೆ ಒಂದೆಡೆ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಿವಿಧ ಇಲಾಖೆಗಳು ಗೌರವ ಸಮರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಕಳಸ ಪ್ರಬೋಧಿನಿ ವಿದ್ಯಾಕೇಂದ್ರದ ಐದನೇ ತರಗತಿ ವಿದ್ಯಾರ್ಥಿ ಅಭಿನವ್ ಒಂದು ವರ್ಷದಿಂದ ಕೂಡಿಟ್ಟ ಪಾಕೆಟ್ ಮನಿಯನ್ನು ಯೋಧನಿಗೆ ಕೊಟ್ಟು ದೇಶದ ಸೈನಿಕರ ಬಗ್ಗೆ ಗೌರವ ತೋರಿಸಿದ್ದಾನೆ.
ತನ್ನ ಶಿಕ್ಷಕರೊಂದಿಗೆ ವೇದಿಕೆಗೆ ಬಂದ ವಿದ್ಯಾರ್ಥಿ ಮುಚ್ಚಿದ ಲಕೋಟೆಯಲ್ಲಿ ಹಣವನ್ನು ಇಟ್ಟು ಯೋದ ರಾಜಪ್ಪನವರ ಕೈಗಿಟ್ಟು ದೇಶ ಸೇವೆ ಮಾಡುವ ನಮ್ಮ ಸೈನಿಕರ ಮೇಲಿನ ಅಭಿಮಾನವನ್ನು ತೋರಿಸಿದ್ದಾನೆ.

ರಾಜಪ್ಪ ಅವರು ಕಳಸ ತಾಲ್ಲೂಕಿನ ಹಳುವಳ್ಳಿಯ ದಂದಾಡಿ ಗ್ರಾಮದವರಾಗಿದ್ದು, ಭಾರತ ಸೇನೆಯ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ಹಲವು ವರ್ಷಗಳಿಂದ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೇನೆಯ ಅನೇಕ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ.



