ಸರ್ಕಾರಿ ಜಮೀನುಗಳಲ್ಲಿ ಬೆಳೆಯುತ್ತಿರುವ ಪ್ಲಾಂಟೇಶನ್ ಬೆಳೆಗಳ ಜಮೀನುಗಳನ್ನು ಗುತ್ತಿಗೆಗೆ ನೀಡುವ ಕುರಿತು ಸಂಬಂಧಪಟ್ಟ ಬೆಳೆಗಾರರಿಂದ ಅರ್ಜಿಯನ್ನು ಸ್ವೀಕರಿಸಲು ಅವಧಿಯನ್ನು ವಿಸ್ತರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬೆಳೆಗಾರರ ಸಂಘಟನೆಗಳ ಒತ್ತಾಯದ ಮೇರೆಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಲಾಗಿದ್ದು. 2025ರ ಜುಲೈ 15 ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ದಿನಾಂಕ: 01.01.2005ರ ಪೂರ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು ಗುತ್ತಿಗೆಗೆ ನೀಡುವ ಬಗ್ಗೆ ನಮೂನೆ-9 ರಲ್ಲಿ ಸಂಬಂಧಪಟ್ಟ ಬೆಳೆಗಾರರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅನುವಾಗುವಂತೆ ದಿನಾಂಕ: 15.07.2025ರವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದ್ದು, ಬೆಳೆಗಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜೂನ್ 9 ರಂದು ಚಿಕ್ಕಮಗಳೂರಿನಲ್ಲಿ ನಡೆದ ಬೆಳೆಗಾರರ ಸಮಾವೇಶದಲ್ಲಿಯೂ ಈ ವಿಚಾರವಾಗಿ ಪ್ರಸ್ತಾಪ ಮಾಡಲಾಗಿತ್ತು. ಬೆಳೆಗಾರರ ಮನವಿಗೆ ಸ್ಪಂದಿಸಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಯುವ ಪ್ರದೇಶಗಳ ಶಾಸಕರುಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳು ಮುತುವರ್ಜಿ ವಹಿಸಿದ್ದು ಅವರೆಲ್ಲರಿಗೂ ರೈತರ ಪರವಾಗಿ ಧನ್ಯವಾದ ಸಲ್ಲಸಿದ್ದಾರೆ.
ಅದೇ ರೀತಿ ಕಾಫಿ ಬೆಳೆಯುವ ಮೂರು ಜಿಲ್ಲೆಗಳ ವ್ಯಾಪ್ತಿಯ ರೈತರ ಇನ್ನುಳಿದ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಬೇಕಾಗಿದೆ. ಪ್ರಮುಖವಾಗಿ ಡೀಮ್ಡ್ ಫಾರೆಸ್ಟ್ ಮತ್ತು 4(1) ನೋಟಿಫಿಕೇಷನ್ ಮಾಡುವ ಸಂದರ್ಭದಲ್ಲಿ ಫಾರೆಸ್ಟ್ ಸೆಟ್ಲ್ ಮೆಂಟ್ ಆಫೀಸರ್ (ಎಫ್ ಎಸ್ ಓ)ಗಳು ಸ್ಥಳ ಪರಿಶೀಲನೆ ನಡೆಸಿ ಜನವಸತಿ ಪ್ರದೇಶಗಳು, ಸಾರ್ವಜನಿಕ ಶಾಲೆ, ಸ್ಮಶಾನ, ಆಟದ ಮೈದಾನ, ಗೋಮಾಳ ಮತ್ತು ರೈತರು ಸಾಗುವಳಿ ಮಾಡಿರುವ ಜಮೀನುಗಳನ್ನು ಹೊರಗಿಟ್ಟು ಉಳಿದ ಜಾಗವನ್ನು ಮಾತ್ರ ಅರಣ್ಯವೆಂದು ಗುರುತಿಸಬೇಕೆಂದು ಆಗ್ರಹಿಸಿದ್ದಾರೆ.
ಇದರಿಂದ ಮೂರು ಜಿಲ್ಲೆಗಳ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಮತ್ತು ತಲತಲಾಂತರದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಸಾವಿರಾರು ರೈತರ ತಲೆಮೇಲೆ ಇರುವ ತೂಗುಕತ್ತಿಯನ್ನು ತಪ್ಪಿಸಿದಂತಾಗುತ್ತದೆ. ರೈತರ ದಶಕಗಳ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಶಾಸಕರು, ಸಚಿವರುಗಳು ಬೆಳೆಗಾರರ ಸಂಘಟನೆಗಳ ಮತ್ತು ಅಧಿಕಾರಿಗಳ ಸಭೆಯನ್ನು ಕರೆದು ಸೂಕ್ತ ತೀರ್ಮಾನ ಕೈಗೊಂಡು ನಿರ್ದೇಶನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.



