ರಾಜ್ಯಾಧ್ಯಂತ ಕಾರ್ಮಿಕರ ಆರೋಗ್ಯದ ಕಾಳಜಿ ವಹಿಸಿ ರಾಜ್ಯ ಸರಕಾರ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಜಾರಿಗೊಳಿಸಿರುವುದರಿಂದ ಕಟ್ಟಡ ಕಾರ್ಮಿಕರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ತಾ.ಪಂ. ಆವರಣದಲ್ಲಿ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ತನ್ನ ಕ್ಷೇತ್ರವ್ಯಾಪ್ತಿ ದೊಡ್ಡದಾಗಿದ್ದು, ಆರೋಗ್ಯ ಸಮಸ್ಯೆ ಎದುರಾದಾಗ ತುರ್ತಾಗಿ ಪಟ್ಟಣದ ಆಸ್ಪತ್ರೆಗೆ ಆಗಮಿಸಲು ಕಷ್ಟವಾಗುತ್ತದೆ. ಇದೀಗ ಕಳಸ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ನಿಂದಾಗಿ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಆರೋಗ್ಯ ತಪಾಸಣೆಗೆ ಅನುಕೂಲವಾಗಿದೆ. ಅಲ್ಲದೇ ಈ ಸಂಚಾರಿ ವಾಹನ ಪ್ರತಿ ಹಳ್ಳಿಗೆ ಸಂಚರಿಸುವಾಗ ಕಾರ್ಮಿಕರಿಗೆ ಮೊಬೈಲ್ ಕರೆಗಳು ಮಾಡುವ ಮೂಲಕ ಮೊದಲೇ ಮಾಹಿತಿ ತಿಳಿಸುವುರಿಂದ ಆರೋಗ್ಯ ತಪಾಸಣೆಗೆ ಅನುಕೂಲವಾಗಲಿದೆ. ಪ್ರತಿಯೊಬ್ಬ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಟೈಲ್ಸ್ ಲೇಯರ್ ಟೂಲ್ಕಿಟ್, ಮೀನುಗಾರಿಗೆ ಇಲಾಖೆಯಿಂದ ಫಲಾನುಭಿಗಳಿಗೆ ತೆಪ್ಪಾ ಹಾಗೂ ಬಲೆ, ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ಪ್ರೋತ್ಸಾಹಕ್ಕಾಗಿ ಗಿಡಗಳನ್ನು ವಿತರಿಸಲಾಯಿತು.
ತಹಸೀಲ್ದಾರ್ ರಾಜಶೇಖರ್ ಮೂರ್ತಿ, ತಾ.ಪಂ. ಇಒ ದಯಾವತಿ, ಕೆಡಿಪಿ ಅಧಿಕಾರಿ ಮಹೇಶ್ಕುಮಾರ್, ಹಿರಿಯ ಕಾರ್ಮಿಕ ನಿರೀಕ್ಷಕ ಎಚ್.ಕೆ.ಪ್ರಭಾಕರ್, ಚಿಕ್ಕಮಗಳೂರು ಕಾರ್ಮಿಕ ಇಲಾಖೆ ಎಕ್ಸಿಕ್ಯೂಟಿವ್ ಹ್ಯಾರಿಸ್, ಸಂಚಾರಿ ಘಟಕದ ಉಮೇಶ್, ತೊಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ, ಮೀನುಗಾರಿಕೆ ಇಲಾಖೆಯ ಮಹೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



