ಸರ್ಫಾಸಿ ಕಾಯ್ದೆಯಡಿ ತಮ್ಮ ಸಂಪೂರ್ಣ ಆಸ್ತಿ ಹರಾಜಾಗಿದ್ದು, ನಮ್ಮ ಬದುಕಿಗೆ ಮುಂದಿನ ದಾರಿ ತೋಚದೇ ಕೃಷಿಕ ದಂಪತಿಗಳು ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಮೂಡಿಗೆರೆ ತಾಲ್ಲೂಕು ದೇವರುಂದ ಗ್ರಾಮದ ಡಿ.ಆರ್. ವಿಜಯ ಮತ್ತು ಶ್ರೀಮತಿ ಪಾರ್ವತಿಯವರು ತಮಗೆ ದಯಾಮರಣ ನೀಡಿ ಎಂದು ಮೂಡಿಗೆರೆ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಅವರು ತಮ್ಮ ಮನವಿಯಲ್ಲಿ ; ನಾವು ಕರ್ನಾಟಕ ಗ್ರಾಮೀಣ ಬ್ಯಾಂಕ್, ಮೂಡಿಗೆರೆ ಶಾಖೆಯಲ್ಲಿ ನಮ್ಮ ಅಸ್ತಿಯ ಮೇಲೆ ಕೃಷಿ ಸಾಲ ಮಾಡಿದ್ದೇವು.
ಮೂಡಿಗೆರೆ ತಾಲ್ಲೂಕಿನ ಕೆಲ್ಲೂರು ಗ್ರಾಮದ ಸ.ನಂ-40/2 ಡಿ.ಆರ್. ವಿಜಯ ಬಿನ್ ಲೇಟ್ ರಾಮೇಗೌಡ ಹೆಸರಿನಲ್ಲಿರುವ ವಿಸ್ತೀರ್ಣ 4 ಎಕರೆ ಕಾಫಿ ತೋಟದ ದಾಖಲೆಗಳನ್ನು ನೀಡಿ ರೂ. 25,90,000-00 (ರೂ. ಇಪ್ಪತ್ತೈದು ಲಕ್ಷದ ತೊಂಬತ್ತು ಸಾವಿರ) ಸಾಲವನ್ನು
ಶ್ರಿಮತಿ ಹೆಚ್.ಎನ್. ಪಾರ್ವತಿ ಕೋಂ ಡಿ.ಆರ್. ವಿಜಯ ಹೆಸರನಲ್ಲಿ ಮೂಡಿಗೆರೆ ತಾಲ್ಲೂಕು, ಕಸಬಾ ಹೋಬಳಿ, ಕೆಲ್ಲೂರು ಗ್ರಾಮದ ಸ.ನಂ-40/1 ರಲ್ಲಿ ವಿಸ್ತೀರ್ಣ 3 ಎಕರೆ 39 ಗುಂಟೆ ಜಮೀನಿನ ಮೇಲೆ ರೂ. 6,00,000-(ರೂ. ಆರು ಲಕ್ಷ) ಸಾಲವನ್ನು ಪಡೆದಿರುತ್ತೇವೆ.
ಬೆಳೆನಷ್ಟ, ಬೆಲೆ ಏರಿಳಿತ, ಹವಾಮಾನ ವೈಪರೀತ್ಯ, ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿ, ಆರ್ಥಿಕ ಸಂಕಷ್ಟ ಮುಂತಾದ ಕಾರಣಗಳಿಂದ ನಾವು ಸಕಾಲದಲ್ಲಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಬ್ಯಾಂಕ್ ನವರು ನಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ನಮ್ಮ ಸಾಲಕ್ಕೆ ಕಾನೂನು ಬಾಹೀರವಾಗಿ ಸರ್ಫಾಸಿ ಕಾಯ್ದೆಯನ್ನು ಹೇರಿ ಆನ್ಲೈನ್ ಮೂಲಕ ಹರಾಜು ಹಾಕಿರುತ್ತಾರೆ.
ದಿನಾಂಕ 20-1-2024 ರಂದು ನಮ್ಮಿಂದ ಒಟ್ಟು ರೂ. 5,30,000-00(ರೂ. ಐದು ಲಕ್ಷದ ಮೂವತ್ತು ಸಾವಿರ) ಹಣವನ್ನು ಸಹ ಸಾಲದ ಬಾಬ್ತು ಪಾವತಿ ಮಾಡಿಸಿಕೊಂಡಿರುತ್ತಾರೆ. ಇಷ್ಟು ಹಣವನ್ನು ಕಟ್ಟಿ ನಮಗೆ ಸಾಲ ಮರುಪಾವತಿಸಲು ಕಾಲಾವಕಾಶ ನೀಡುತ್ತೇವೆ ಎಂದು ತಿಳಿಸಿದ್ದರು. ಆದರೆ ಈಗ ನಮಗೆ ಗಮನಕ್ಕೆ ಬಾರದ ರೀತಿಯಲ್ಲಿ ಸುಮಾರು 3 ಕೋಟಿ ಬೆಲೆಬಾಳುವ ನಮ್ಮ ಸಂಪೂರ್ಣ ಭೂಮಿಯನ್ನು (ವಿಸ್ತೀರ್ಣ 7 ಎಕರೆ 39 ಗುಂಟೆ) ಕೇವಲ 89 ಲಕ್ಷದ 50 ಸಾವಿರಕ್ಕೆ ಆನ್ಲೈನ್ ಮೂಲಕ ಹರಾಜು ಮಾಡಿ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡಿರುತ್ತಾರೆ.
ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ನಮಗೆ ಈ ಜಮೀನು ಬಿಟ್ಟರೆ ಬೇರೆ ಜೀವನ ಮಾರ್ಗವಿಲ್ಲ. ನಾವು ಈಗಾಗಲೇ ಹಿರಿಯ ನಾಗರೀಕರಾಗಿದ್ದು, ಬೇರೆ ದುಡಿಮೆಯ ದಾರಿ ಯಾವುದೂ ತೋಚುತ್ತಿಲ್ಲ. ಆದ್ದರಿಂದ ನಮ್ಮ ಮುಂದಿನ ಜೀವನಕ್ಕೆ ದಾರಿ ಕಾಣದಾಗಿದೆ.
ಒಂದು ತಿಂಗಳ ಒಳಗಾಗಿ ಹರಾಜಾಗಿರುವ ನಮ್ಮ ಭೂಮಿಯನ್ನು ಮರಳಿಸಬೇಕು ಮತ್ತು ನಮ್ಮ ಭೂಮಿಯನ್ನು ಕಾನೂನುಬಾಹೀರವಾಗಿ ಹರಾಜು ಹಾಕಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದೇ ಹೋದರೆ ರಾಷ್ಟ್ರಪತಿಯವರು ನಮಗೆ ದಯಾಮರಣ ನೀಡಬೇಕೆಂದು ಮನವಿಯಲ್ಲಿ ಕೋರಿದ್ಧಾರೆ.



