ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಚಿಕ್ಕಮಗಳೂರು ನಗರದ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ಚಿಕ್ಕಮಗಳೂರು-ತಿರುಪತಿ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ಅವರು ಮಾತನಾಡಿ ಹಾಸನ-ಚಿಕ್ಕಮಗಳೂರು ರೈಲ್ವೆಗೆ ಅಗತ್ಯವಿರುವ ಜಾಗವನ್ನು ಇನ್ನೊಂದು ತಿಂಗಳಲ್ಲಿ ರೈಲ್ವೇ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಹೀಗಾಗಿ ಇನ್ನೆರಡು ವರ್ಷಗಳಲ್ಲಿ ಹಾಸನ-ಬೇಲೂರು-ಚಿಕ್ಕಮಗಳೂರು ಮಾರ್ಗ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಚಿಕ್ಕಮಗಳೂರಿನಿಂದ ತಿರುಪತಿಗೆ ವಾರದಲ್ಲಿ ಮೂರು ದಿನ ರೈಲು ಓಡಿಸುವಂತೆ ಕೋರಿಕೆ ಇಟ್ಟಿದ್ದೀರಿ ಈ ಬಗ್ಗೆ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು. ಚಿಕ್ಕ ಬಾಣಾವರ ಹಾಸನ ಮಾರ್ಗದ ವಿದ್ಯುದೀಕರಣ 187 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಚಿಕ್ಕಮಗಳೂರು ಮತ್ತು ಬೀರೂರು ಡಬ್ಬಲ್ ಕ್ರಾಸಿಂಗ್ಗೆ 70 ಕೋಟಿ ರೂ. ಕೊಡುತ್ತಿದ್ದೇವೆ. ಚಿಕ್ಕಾನವಂಗಲ ಅಜ್ಜಂಪುರಕ್ಕೆ ಮೇಲು ಸೇತುವೆಗೆ 50 ಕೋಟಿ ರೂ. ಮಂಜೂರು ಮಾಡಿ ಕೆಲಸ ಆರಂಭಿಸಲಾಗಿದೆ. ಬೀರೂರು-ಶಿವಮೊಗ್ಗ 63 ಕಿ.ಮೀ. ಮತ್ತು ಶವಮೊಗ್ಗ-ಶೃಂಗೇರಿ-ಮಂಗಳೂರು ನಡುವಿನ 330 ಕಿ.ಮೀ. ಹೊಸ ಮಾರ್ಗದ ಸರ್ವೇ ಕಾರ್ಯ ಆರಂಭಿಸುತ್ತಿದ್ದೇವೆ. ಇದಲ್ಲದೆ ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯಕ್ಕೆ ರೈಲು ಸಂಪರ್ಕ ಕಲ್ಪಿಸಲು ಸರ್ವೇ ಕಾರ್ಯ ಆರಂಭಿಸುವ ಕುರಿತು ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ ಎಂದರು.
ಇಂದು ಇಲ್ಲಿ ಜನರಲ್ಲಿ ಕಂಡು ಬರುತ್ತಿರುವ ಉತ್ಸಾಹವು ಇಲ್ಲಿನ ದತ್ತಾತ್ರೇಯರು ಮತ್ತೊಂದು ತಿರುಪತಿಯ ಶ್ರೀನಿವಾಸ ಮತ್ತೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ದೂರದೃಷ್ಠಿ ಫಲವಾಗಿ ಇಂದು ಈ ನೂತನ ರೈಲಿಗೆ ಚಾಲನೆ ಸಿಕ್ಕಿದೆ. ಇದಕ್ಕಾಗಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರೈಲ್ವೇ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ.50 ರಷ್ಟು ಅನುದಾನ ನೀಡಿ ಪೂರ್ಣಗೊಳಿಸಬೇಕಿತ್ತು. ಈ ಕಾರಣಕ್ಕೆ ಎಲ್ಲೂ ಕೆಸಲ ಆಗುತ್ತಿರಲಿಲ್ಲ. ರಾಜ್ಯ ಸರ್ಕಾರಗಳು ಸರಿಯಾಗಿ ಹಣ ಕೊಡುತ್ತಿರಲಿಲ್ಲ. ಈ ಕಾರಣಕ್ಕೆ ಪ್ರಧಾನ ಮಂತ್ರಿಗಳು ಇಡೀ ರಾಜ್ಯದಲ್ಲಿರುವ ಎಲ್ಲಾ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ಕೇಂದ್ರದಿಂದಲೇ ಶೇ.100 ರಷ್ಟು ಅನುದಾನ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಇದು ಸುಲಭದ ಕೆಲಸವಲ್ಲ ಸಹಸ್ರಾರು ಕೋಟಿ ಖರ್ಚಾಗುತ್ತದೆ ಎಂದರು.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶೃಂಗೇರಿ, ಉಡುಪಿ, ಕೊಲ್ಲೂರು-ದತ್ತಪೀಠ ಮಾರ್ಗವಾಗಿ ವಿಶೇಷ ರೈಲು ಸಂಚಾರಕ್ಕೆ ಸರ್ವೆ ಕಾರ್ಯ ಆರಂಭಿಸಬೇಕು ಹಾಗೂ ವಂದೇ ಭಾರತ್ ಇಂಟರ್ಸಿಟಿ ರೈಲು ಬೀರೂರು ಮತ್ತು ಕಡೂರಿನಲ್ಲಿ ನಿಲುಗಡೆ ಮಾಡಬೇಕೆಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ದತ್ತಾತ್ರೇಯನ ಕ್ಷೇತ್ರದಿಂದ ಶ್ರೀನಿವಾಸನ ಕ್ಷೇತ್ರಕ್ಕೆ ಇಂದು ನೂತನ ರೈಲು ಸಂಚಾರ ಆರಂಭಿಸಿ ಬೇಡಿಕೆ ಈಡೇರಿಸಿರುವುದಕ್ಕೆ ಸಂಸದರು, ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವಾಗಿ ರೈಲು ಸಂಚಾರ ಆರಂಭವಾದರೆ ಮೈಸೂರು, ಬೆಂಗಳೂರು, ಧಾರವಾಡ ಸೇರಿದಂತೆ ದೇಶದ ಉದ್ದಗಲಕ್ಕೆ ರೈಲ್ವೆ ಪ್ರಯಾಣ ಆರಂಭಿಸಲು ನಾಗರೀಕರಿಗೆ ಅನುಕೂಲವಾಗಲಿದೆ. 2029 ರ ಒಳಗೆ ಈ ಮಾರ್ಗವಾಗಿ ರೈಲು ಸಂಚಾರ ಆರಂಭ ಮಾಡುವಂತೆ ಸಚಿವ ಸೋಮಣ್ಣನವರಲ್ಲಿ ವಿನಂತಿಸಿದರು.
ದೇವನೂರಿನಲ್ಲಿ ಕೋವಿಡ್ನಿಂದೀಚೆಗೆ ರೈಲ್ವೆ ನಿಲುಗಡೆ ಕಡಿಮೆಯಾಗಿದ್ದು, ಇದರಿಂದಾಗಿ ಬಯಲು ಭಾಗದ ಜನರಿಗೆ ತೊಂದರೆಯಾಗಿದ್ದು, ಮೊದಲು ನಿಲುಗಡೆಯಾಗುತ್ತಿದ್ದ 13 ರೈಲುಗಳನ್ನು ನಿಲುಗಡೆ ಮಾಡಬೇಕು. ಕಣಿವೇಹಳ್ಳಿ ಅಂಡರ್ ಪಾಸ್, ಚಿಕ್ಕದೇವನೂರು ಸಮೀಪ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಮನವಿ ಮಾಡಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ನೂತನ ಚಿಕ್ಕಮಗಳೂರು-ತಿರುಪತಿ ರೈಲಿಗೆ ಗುರು ದತ್ತಾತ್ರೇಯ ಎಂಬ ಹೆಸರನ್ನು ನಾಮಕರಣ ಮಾಡಲು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಶಾಸಕ ಡಿ.ಎಸ್. ಸುರೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಬಿಜೆಪಿ ಮುಖಂಡರಾದ ಹೆಚ್.ಸಿ. ಕಲ್ಮರುಡಪ್ಪ, ಎಂ.ಆರ್ ದೇವರಾಜ್ ಶೆಟ್ಟಿ, ಪುಷ್ಪರಾಜ್, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಡಾ. ವಿಕ್ರಮ ಅಮಟೆ, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ ಉಪಸ್ಥಿತರಿದ್ದರು.




