union bank

 

 

ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರ್ ಕೊರವರ್ ಅಭಿಪ್ರಾಯಿಸಿದರು.

ಅವರು ಚಿಕ್ಕಮಗಳೂರು ಅಂಬೇಡ್ಕರ್ ಭವನದಲ್ಲಿ ಯೂನಿಯನ್ ಬ್ಯಾಂಕ್ ವತಿಯಿಂದ ಏರ್ಪಡಿಸಲಾಗಿದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ವಿವಾಹ ನೋಂದಣಿ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಜಿಲ್ಲೆಯ ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕಾಗಿ ಸರ್ಕಾರ ಬ್ಯಾಂಕ್‌ಗಳ ಮೂಲಕ ಆರ್ಥಿಕ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಸ್ವ-ಉದ್ಯೋಗ ಸ್ಥಾಪಿಸಿ ಮಹಿಳೆಯರು ಆರ್ಥಿಕ ಸದೃಢರಾಗಬೇಕೆಂದು ಕರೆನೀಡಿದರು.

ಹೆಣ್ಣುಮಕ್ಕಳು ಆರ್ಥಿಕ ಸುಧಾರಣೆಯಾದರೆ ದೇಶ ಸುಭಿಕ್ಷವಾಗುತ್ತದೆ ಎಂಬುದನ್ನು ಮನಗಂಡ ಸರ್ಕಾರ ಈ ವರ್ಷ ‘ನಾರಿಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದೆ ಎಂದ ಅವರು ಮಹಿಳೆಯರು ಯಾವುದೇ ಉದ್ಯೋಗ ಕೈಗೊಳ್ಳಬೇಕಾದರೆ ಕೌಶಲ್ಯ ತರಬೇತಿ ಅಗತ್ಯ ಆ ಮೂಲಕ ಮಹಿಳೆಯರನ್ನು ಉದ್ಯೋಗದತ್ತ ಆಸಕ್ತಿ ಮೂಡಿಸಿ ಮುಖ್ಯ ವಾಹಿನಿಗೆ ತರಬೇಕೆಂಬುದು ಯೂನಿಯನ್ ಬ್ಯಾಂಕಿನ ತರಬೇತಿ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಘೋಷಣೆಯೊಂದಿಗೆ ದುಡಿಮೆ ಮಾಡುವುದು ಅತೀ ಮುಖ್ಯ, ‘ಕೂಡಿ ಬಾಳೋಣ ಎಲ್ಲರೂ ಸೇರಿ ದುಡಿಯೋಣ’ ಎಂಬ ಡಾ. ರಾಜ್‌ಕುಮಾರ್ ನಟನೆಯ ಬಂಗಾರದ ಮನುಷ್ಯ ಚಿತ್ರದ ಹಾಡನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಜಿಲ್ಲೆಯಲ್ಲಿ 1 ಲಕ್ಷ ಕುಟುಂಬಗಳು ಸ್ವ-ಸಹಾಯ ಸಂಘಗಳ ಮೂಲಕ ಕಾರ್ಯಚಟುವಟಿಕೆ ನಡೆಸುತ್ತಿವೆ, ಉಳಿತಾಯ ಮಾಡಿ ತರಬೇತಿ ಪಡೆದು ಹೆಚ್ಚು ಆರ್ಥಿಕ ಸಬಲರಾಗಬೇಕೆಂದು ತಿಳಿಸಿದರು.

ಪ್ರಸಕ್ತ ವರ್ಷ 10296 ಕೋಟಿ ರೂಗಳನ್ನು ಎಲ್ಲಾ ಬ್ಯಾಂಕ್‌ಗಳ ಮೂಲಕ ಸಾಲ ವಿತರಣೆಗೆ ಗುರಿ ಹೊಂದಲಾಗಿದೆ. ಇದರಲ್ಲಿ ಕೃಷಿಗೆ 70 ಕೋಟಿ, ಶಿಕ್ಷಣಕ್ಕೆ 26 ಕೋಟಿ, ಮನೆ ನಿರ್ಮಾಣಕ್ಕೆ 50 ಕೋಟಿ ಸೇರಿದಂತೆ ರೈತರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸಾಲ ನೀಡಲಾಗುವುದೆಂದು ಹೇಳಿದರು.

ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಬಡವರು ಮತ್ತು ಮಹಿಳೆಯರು ಸ್ವ-ಉದ್ಯೋಗ ಸ್ಥಾಪಿಸಲು ನೆರವಾಗುವಂತೆ ವಾರ್ಷಿಕ ಶೇ.7 ರ ಬಡ್ಡಿದರದಲ್ಲಿ ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್‌ಗಳು ಸಾಲಸೌಲಭ್ಯ ನೀಡುತ್ತಿವೆ ಎಂದು ಮಾಹಿತಿ ನೀಡಿದರು. ಬಡವರ ಆರ್ಥಿಕ ಮಟ್ಟ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾದ್ದು, ಇದರಿಂದ ಬಡತನ ನಿರ್ಮೂಲನೆಯಾಗಬೇಕೆಂದು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಬೀದಿಬದಿ ವ್ಯಾಪಾರಿಗಳು ಯೂನಿಯನ್ ಬ್ಯಾಂಕಿನಿಂದ ಸಾಲ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ. ಸಹಾಯಧನದ ಮೂಲಕ 10 ಲಕ್ಷ ರೂಗಳನ್ನು ಸ್ವ-ಸಹಾಯ ಸಂಘಗಳಿಗೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಕುಟುಂಬಕ್ಕೆ ನೆರವಾಗಬೇಕೆಂದು ಸಲಹೆ ನೀಡಿದರು. ಬಾಲ್ಯ ವಿವಾಹ ಪದ್ದತಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು, ಸರ್ಕಾರ ನಿಗಧಿಗೊಳಿಸಿರುವ ವಯಸ್ಸನ್ನು ಪರಿಗಣಿಸಿ ವಿವಾಹವಾದರೆ ಮಾತ್ರ ಉತ್ತಮವಾದ ವಿಕಲಚೇತನರಲ್ಲದ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಮಹಿಳೆಯರಲ್ಲಿ ಅರಿವು ಮೂಡಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ಪ್ರಾಸ್ತಾವಿಕವಾಗಿ ಮಾತನಾಡಿ, 1972 ರಿಂದ ಅಸ್ತಿತ್ವಕ್ಕೆ ಬಂದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಮಹಿಳೆ ಮತ್ತು ಪುರುಷರ ಗುಂಪು ಸೇರಿ ಚಟುವಟಿಕೆ ಪ್ರಾರಂಭಿಸಿ ಪರಸ್ಪರ ಆರ್ಥಿಕ ನೆರವು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು. ಸ್ವ-ಸಹಾಯ ಸಂಘಗಳಲ್ಲಿ ಉಳಿತಾಯ ಮಾಡಿದ ಹಣದಿಂದ ಸಮಾಜದ ನೊಂದವರಿಗೆ ನೆರೆವು ನೀಡಿ ಎಂದ ಅವರು, ಗುಡಿ ಕೈಗಾರಿಕೆಗಳ ಮೂಲಕ ಆರ್ಥಿಕ ಸಹಾಯ ಮಾಡಲು ಸ್ವ-ಸಹಾಯ ಸಂಘಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ವಿಶುಕುಮಾರ್, ಯೋಜನಾ ನಿರ್ದೇಶಕರಾದ ನಯನ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಶಾಂತ್, ರಾಜೇಂದ್ರ, ಯೂನಿಯನ್ ಬ್ಯಾಂಕ್ ನಿರ್ದೇಶಕ ಶ್ರೀ ಪ್ರಸಾದ್, ಮಂಜುನಾಥ್, ಲೋಹಿತ್, ಗಿರೀಶ್, ಹರೀಶ್, ಕುಮಾರ್, ಚಂದ್ರಶೇಖರ್, ಕಲಾವತಿ, ಭರತ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ