ಬಹಳ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಕ್ಯಾತನಬೀಡು ಪ್ರತಿಷ್ಟಾನದ ಕಾರ್ಯದರ್ಶಿ ರವೀಶ್ ಕ್ಯಾತನಬೀಡು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಜಾನ್ಸಾಲೆ ಗ್ರಾಮದ ಕೃಷಿಕ ರವೀಶ್ ಅವರ ಮನೆಯಂಗಳದಲ್ಲಿ ಕ್ಯಾ ತನಬೀಡು ಪ್ರತಿಷ್ಟಾನ ಗುರುವಾರ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
50 ಎಕರೆಯಷ್ಟು ವಿಶಾಲವಾದ ಲಕ್ಸಾಗರ ಕೆರೆ ಬಹಳ ವರ್ಷಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿತ್ತು, ಜಾನ್ಸಾಲೆ ಸುತ್ತಮುತ್ತಲ ರೈತರ ಜೀವನಾಡಿಯಾಗಿತ್ತು, ಆದರೆ ಇದೀಗ ಆ ಕೆರೆ ನೀಲಗಿರಿ ಮರಗಳ ತೋಪಾಗಿ ಅವಸಾನದ ಅಂಚಿನಲ್ಲಿದ್ದು ಕೃಷಿಕರ ಉಪಯೋಗಕ್ಕೆ ಬಾರದಂತಾಗಿದೆ ಎಂದು ವಿಷಾದಿಸಿದರು.
ಬಯಲು ಸೀಮೆಯಲ್ಲಿ ಯಾವಾಗಲೂ ಮಳೆ ಕೊರತೆ ಎದುರಾಗುವುದರಿಂದಾಗಿ ರಾಜ್ಯ ಸರ್ಕಾರ ಲಕ್ಸಾಗರ ಕೆರೆಯನ್ನು ಅಭಿವೃದ್ಧಿಪಡಿಸಬೇಕು, ಗುಡ್ಡಗಳ ಬೀಳು ನೀರು ಕೆರೆಗೆ ಹರಿಯುವಂತೆ ಮಾಡಬೇಕು, ಸ್ಥಳೀಯ ರೈತರೂ ಸಹ ಕಣ್ಮರೆಯಾಗುತ್ತಿರುವ ಕೆರೆಯನ್ನು ಉಳಿಸಲು, ಸಂರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ರೈತ ಸಮುದಾಯ ಮಾತು ಮರೆತು ಮೌನಕ್ಕೆ ಶರಣಾಗಿರುವ ಈ ಹೊತ್ತಿನಲ್ಲಿ ಕೃಷಿಕರ ನೋವು, ನಲಿವು, ಸಂಕಟ, ಬೇಗುದಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಗುರುಶಾಂತಪ್ಪ ಜಿಲ್ಲೆಯಲ್ಲಿ ಹುಟ್ಟುವ ಎಲ್ಲಾ ನದಿಗಳು ಬೇರೆ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಹರಿದು ಅಲ್ಲಿ ನನ್ನ ನೆಲವನ್ನು ಸಂಪದ್ಬ ರಿತಗೊಳಿಸುತ್ತಿವೆ, ಆದರೆ ನಮಗೆ ಅದರಿಂದ ಯಾವುದೇ ಪ್ರಯೋಜನವೂ ಆಗುತ್ತಿಲ್ಲ, ಜಿಲ್ಲೆಯಲ್ಲಿರುವ ಕೆರೆಕಟ್ಟೆಗಳು ದಿನೇ ದಿನೇ ಕಣ್ಮರೆಯಾಗುತ್ತಿವೆ ಎಂದು ವಿ?ದಿಸಿ ಅವುಗಳನ್ನು ಉಳಿಸಿಕೊಳ್ಳುವತ್ತ ರೈತಾಪಿ ವರ್ಗ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಆಧುನಿಕತೆಯಿಂದಾಗಿ ರಾಸಾಯನಿಕ ಕೃಷಿಗೆ ರೈತರು ಮುಂದಾದ ಪರಿಣಾಮ ಇಂದು ಭೂಮಿ ಬರಡಾಗುತ್ತಿದೆ, ಕುಡಿಯುವ ನೀರು, ಗಾಳಿ, ತಿನ್ನುವ ಅನ್ನ ಎಲ್ಲವೂ ವಿಷವಾಗಿದೆ ಎಂದ ಅವರು ರೈತರು ಈಗಲಾದರೂ ಎಚ್ಚೆತ್ತು ಕೊಳ್ಳಬೇಕು, ನೆಲ, ಜಲವನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಸಿ ಪಿ ಐ ರಾಜ್ಯ ಸಹಕಾರ್ಯದರ್ಶಿ ಬಿ. ಅಮ್ಜದ್ ಮಾತನಾಡಿ ಸಾಲ ಸೋಲಗಳಿಂದ, ಸರ್ಕಾರಗಳ ಕಡೆಗಣನೆಯಿಂದ ಬೇಸತ್ತು ರೈತ ಕುಟುಂಬಗಳಿಂದು ಕೃಷಿಯಿಂದ ವಿಮುಖವಾಗುತ್ತಿವೆ, ದೇಶದಲ್ಲಿ ಶೇ 80 ರಷ್ಟಿದ್ದ ಕೃಷಿ ಭೂಮಿ ಇಂದು ಶೇ 56 ಕ್ಕೆ ಇಳಿದಿದೆ, ಕಾರ್ಪೊರೇಟ್ ಕಂಪನಿಗಳು, ಮಾಫಿಯಾಗಳು, ಕೃಷಿ ಭೂಮಿಯನ್ನು ಕಬಳಿಸುತ್ತಿವೆ ಎಂದು ವಿ?ದಿಸಿದರು.
ರೈತ ಸಮುದಾಯ ಈಗಲಾದರೂ ಎಚ್ಚೆತ್ತು ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವುದೂ ಸೇರಿದಂತೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕುರಿತು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಕೃಷಿಕ ನಿಂಗಪ್ಪ ರೈತರು ಒಂದಾಗಿ ಹೋರಾಟ ಮಾಡಿದರೆ ಮಾತ್ರ ಕೆರೆ, ಕಟ್ಟೆ, ನೆಲ, ಜಲವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೃಷಿಕ ರವೀಶ್, ತಾಪಂ ಮಾಜಿ ಅಧ್ಯಕ್ಷ ಎನ್. ಡಿ. ಚಂದ್ರಪ್ಪ, ಸಾಹಿತಿ ಡಿ. ಎಂ. ಮಂಜುನಾಥ ಸ್ವಾಮಿ ಮಾತನಾಡಿದರು, ಕೃಷಿಕರಾದ ಪಿಳ್ಳೇನಹಳ್ಳಿ ವಿಜಯಕುಮಾರ್, ನಿಂಗಪ್ಪ, ಚಂದ್ರಪ್ಪ, ಗಂಗಾಧರ್ ಶಿವಪುರ ಸಭೆಯಲ್ಲಿ ಪಾಲ್ಗೊಂಡಿದ್ದರು.



