ಸದಭಿರುಚಿಯ ಹವ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ ಪ್ರತಿಭಾನಂದಕುಮಾರ ನುಡಿದರು.
ಚಿಕ್ಕಮಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಮಹಿಳಾ ಸಂಘದ 17ನೆಯ ಸರ್ವಸದಸ್ಯರ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿನ್ನೆ ಅವರು ಮುಖ್ಯಅತಿಥಿಗಳಾಗಿ ಮಾತನಾಡಿದರು.
ಮಹಿಳೆಯರು ಸಾಮಾನ್ಯವಾಗಿ ಮನೆಯ ಒಳಗೆ-ಹೊರಗೆ ಕಾರ್ಯನಿರ್ವಹಿಸುತ್ತಾ ಒತ್ತಡದ ಬದುಕಿನಲ್ಲಿ ಇರುತ್ತಾರೆ. ಸಂಗೀತ, ಕಲೆ, ಕ್ರೀಡೆ, ಯೋಗ ಸೇರಿದಂತೆ ಸದಭಿರುಚಿಯ ಹವ್ಯಾಸವನ್ನು ರೂಡಿಸಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಸ್ವ-ರಕ್ಷಣೆಯ ಕ್ರಮಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಒಳಿತು. ನಾಲ್ಕು ಜನರೊಂದಿಗೆ ಕಲೆತು-ಬೆರೆತು ಬಾಳುವುದರಿಂದ ನಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಾಕಷ್ಟು ಅವಕಾಶಗಳು ಇವೆ. ಅದನ್ನು ಅರ್ಥಮಾಡಿಕೊಂಡು ಸೂಕ್ತ ಸಂದರ್ಭದಲ್ಲಿ ಬಳಸಿಕೊಳ್ಳುವುದರಿಂದ ನಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶವಾಗುತ್ತದೆ ಎಂದರು.
ವಚನಗಳಲ್ಲಿ ಜೀವನದ ಅನೇಕಮೌಲ್ಯಗಳಿವೆ. ಅವುಗಳನ್ನು ಅರ್ಥಮಾಡಿಕೊಂಡು ಬದುಕಿನಲ್ಲಿ ಅಳವಡಿಕೊಳ್ಳುವ ಅಗತ್ಯವಿದೆ. ಇಂದು ಮೊಬೈಲ್, ಲ್ಯಾಪ್ಟಾಪ್ನಲ್ಲಿ ಮುಳುಗದೆ ಅತಿಥಿ ಸತ್ಕಾರ ಮನಪೂರ್ವಕವಾಗಿ ಮಾಡಬೇಕು. ಮಕ್ಕಳಿಗೆ ಒಳ್ಳೆಯ ನಡವಳಿಕೆಯನ್ನು ಮನೆಯಲ್ಲಿ ಕಲಿಸಬೇಕು. ಅವರಿಚ್ಛೆಯಂತೆ ಸಾಂಸ್ಕøತಿಕವಾಗಿಯೂ ತೊಡಗಿಸಿಕೊಳ್ಳಲು ಅವಕಾಶ ಮಾಡಿದರೆ ಅವರಿಂದ ಉತ್ತಮ ಸಾಧನೆ ನಿರೀಕ್ಷಿಸಬಹುದು.
ತೊಂದರೆಯಲ್ಲಿರುವವರಿಗೆ ನೆರವು ನೀಡುವ ಗುಣಲಕ್ಷಣಗಳನ್ನು ಮನೆಯಲ್ಲೆ ಅನುಸರಿಸುವುದು ಅಗತ್ಯ ಎಂದ ಪ್ರತಿಭಾ, ಅಕ್ಕಮಹಾದೇವಿ ಸಂಘ ಮಹಿಳೆಯರ ಸಂಘಟನೆಗೆ ವಿಶಿಷ್ಟವಾದ ಕೊಡುಗೆ ನೀಡಿಕೊಂಡು ಬಂದಿದೆ ಎಂದು ಶ್ಲಾಘಿಸಿದರು.
ನಗರಸಭಾ ನೂತನ ಅಧ್ಯಕ್ಷೆ ಶೀಲಾದಿನೇಶ್ ಅವರನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸಮಾಜದ ಒಳಿತಿಗೆ ಕೈಜೋಡಿಸುವ ಭರವಸೆ ನೀಡಿದ ಅವರು, ದಶಕಗಳ ಕಾಲ ತಮ್ಮ ಕುಟುಂಬದ ಸದಸ್ಯರು ನಗರಸಭೆಯ ಸದಸ್ಯರಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವದ ಆಧಾರದಮೇಲೆ ಕಾರ್ಯನಿರ್ವಹಿಸುವ ಯೋಚನೆ ಇದೆ. ನಗರದ ಸ್ವಚ್ಛತೆ, ನೀರು, ವಿದ್ಯುದ್ದೀಪ, ರಸ್ತೆದುರಸ್ತಿ ಸೇರಿದಂತೆ ಮೂಲಭೂತ ಅವಶ್ಯಕತೆಗಳ ಸುಸ್ಥಿತಿಗೆ ಶ್ರಮಿಸುವುದಾಗಿ ಶೀಲಾ ನುಡಿದರು.
ನಿ.ಪೂ.ಗೌರವಾಧ್ಯಕ್ಷೆ ಅರ್ಪಿತಾನಿತಿನ್ ಸಮಾರಂಭ ಉದ್ಘಾಟಿಸಿ ಮಾತನಾಡಿ ಮಹಿಳೆಯರನ್ನು ಸಂಘಟಿಸಿ ಅಕ್ಕಮಹಾದೇವಿ ಸಂಘದ ಮೂಲಕ ಉತ್ತಮ ಕಾರ್ಯಗಳಿಗೆ ಅಜ್ಜಿ ಗೌರಮ್ಮಬಸವೇಗೌಡರು ಶ್ರಮಿಸಿದ್ದು ತಮಗೆ ಆದರ್ಶವಾಗಿದೆ. ಸಂಘದ ಚಟುವಟಿಕಗಳಲ್ಲಿ ತೊಡಗಿಸಿಕೊಂಡು ಒಂದಷ್ಟು ಒಳ್ಳೆಯ ಕಾರ್ಯಗಳಲ್ಲಿ ನೆರವಾಗುವ ಭರವಸೆಯಿತ್ತರು.
ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಮಹಿಳೆಯರಿಗೆ ಅಗತ್ಯವಿರುವ ಮಾಹಿತಿಯನ್ನು ತಜ್ಞರಿಂದ ಕೊಡಿಸಲಾಗುತ್ತಿದೆ. ಅವರ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಸಂಘ ಒದಗಿಸಿ ಪ್ರೋತ್ಸಾಹಿಸುತ್ತಿದೆ. ಎಲ್ಲ ಸದಸ್ಯರ ಸಹಕಾರದೊಂದಿಗೆ ಕ್ರಿಯಾಶೀಲ ಚಟುವಟಿಕೆ ನಡೆಸುವ ಆಶಯವಿದೆ ಎಂದರು.
ಗೌರವಾಧ್ಯಕ್ಷೆ ಭಾರತಿಶಿವರುದ್ರಪ್ಪ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಆಶಾಹೇಮಂತ್ ಸ್ವಾಗತಿಸಿ, ಉಪಾಧ್ಯಕ್ಷೆ ಕುಸುಮಾರಾಜಶೇಖರ್ ಪ್ರಾಸ್ತಾವಿಸಿದರು. ನಿರ್ದೇಶಕರುಗಳಾದ ವೀಣಾಮಲ್ಲಿಕಾರ್ಜುನ ನಿರೂಪಿಸಿ, ಮಂಗಳಾ ಪ್ರಾರ್ಥಿಸಿ, ನಾಗಮಣಿಕುಮಾರ್ ತಂಡ ನಾಡಗೀತೆ, ವೀಣಾಜಗದೀಶ್ ಅತಿಥಿಪರಿಚಯಿಸಿ, ವಿಶಾಲಯೋಗೀಶ್ ವಂದಿಸಿದರು.
ಖಜಾಂಚಿ ಪಾರ್ವತಿಬಸವರಾಜು, ಸಹಕಾರ್ಯದರ್ಶಿ ಮಧುಮತಿಶಿವಕುಮಾರ್, ನಿರ್ದೇಶಕರುಗಳಾದ ಪುಷ್ಪಾಸೋಮಶೇಖರ್, ವಿಮಲಾರಾಜಶೇಖರ್, ಭಾಗ್ಯಮಹೇಶ್, ಭವಾನಿವಿಜಯಾನಂದ ವೇದಿಕೆಯಲ್ಲಿದ್ದರು.
ನಿಕಟಪೂರ್ವ ಕಾರ್ಯದರ್ಶಿ ರೇಖಾಉಮಾಶಂಕರ್ ಅಕ್ಕಮಹಾದೇವಿ ಸಂಘಕ್ಕೆ 30,000ರೂ.ದತ್ತಿ ನೀಡಿದರು. ಎಸ್ಎಸ್ಎಲ್ಸಿ-ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಸದಸ್ಯರ 12ವಿದ್ಯಾರ್ಥಿಗಳಿಗೆ ತಲಾ 1,000ರೂ.ಪ್ರೋತ್ಸಾಹಧನ, ಪ್ರಶಸ್ತಿಪತ್ರದೊಂದಿಗೆ ಗೌರವಿಸಲಾಯಿತು.
ವಿವಿಧ ರಾಜ್ಯದ ಉಡುಗೆ ತೊಡುಗೆಯ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ದೇವಿಕಾಷಡಕ್ಷರಿ ಮತ್ತು ಗೀತಾಪ್ರಭು ತೀರ್ಪುಗಾರರಾಗಿದ್ದರು ಅದೃಷ್ಟರಾಣಿ, ಅದೃಷ್ಟಸಿರಿ ಹಾಗೂ ಅದೃಷ್ಟ ವನಿತೆ ವಿಜೇತರಿಗೆ ವಿವಿಧ ಆಟೋಟ ಸ್ಪರ್ಧಾವಿಜೇತರಿಗೆ ಆಶಾಮಲ್ಲೇಶ್ ಮತ್ತು ಹೇಮಲತಾ ಬಹುಮಾನ ವಿತರಿಸಿದರು. ಸುಮಿತ್ರಾಶಾಸ್ತ್ರಿ ಮತ್ತು ಸುಶೀಲಮ್ಮ ವೇದಘೋಷ, ವನಜಾಕ್ಷಿ ಮತ್ತು ಪುಷ್ಪಾಚಿದಾನಂದ ತಂಡ ವಚನಗಾಯನ ಮಾಡಿದರು. ಏಕಪಾತ್ರ ಅಭಿನಯ, ಜಾನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನಸೆಳೆದವು.
ಉಚಿತ ಆರೋಗ್ಯ ತಪಾಸಣೆ: ವಾರ್ಷಿಕೋತ್ಸವ ಅಂಗವಾಗಿ ಬುಧವಾರ ಸಂಘಟನಾಕಾರ್ಯದರ್ಶಿ ಮಂಜುಳಮ್ಮ ನೇತೃತ್ವದಲ್ಲಿ ಉಚಿತ ಆರೋಗ್ಯಶಿಬಿರ ಆಯೋಜಿಸಲಾಗಿತ್ತು. ಆಯುಷ್ ಆಸ್ಪತ್ರೆಯ ಡಾ||ಭಾನುಮತಿ, ಡಾ||ಸುಷ್ಮಾ ಮತ್ತು ಪಂಚಕರ್ಮ ತಜ್ಞೆ ಡಾ||ಕುಸುಮಾ ಅವರಿಂದ ಸುಮಾರು 250ಕ್ಕೂ ಹೆಚ್ಚು ಸದಸ್ಯರಿಗೆ ಆರೋಗ್ಯ ತಪಾಸಣೆಯೊಂದಿಗೆ ಔಷಧಿ,ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಯಿತು.
ವರದಿ : ಪ್ರಭುಲಿಂಗಶಾಸ್ತ್ರಿ



