ಪ್ರತೀ ವರ್ಷದಂತೆ ಈ ವರ್ಷವೂ ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ಗಣೇಶೋತ್ಸವ ನಡೆಸಲು ಪೆಂಡಾಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಸರ್ವರಿಗೂ ವಿಘ್ನವಿನಾಯಕ ಒಳಿತನ್ನು ಮಾಡಲಿ ಎಂದು ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಶುಭ ಹಾರೈಸಿದರು.
ಅವರು ಸೋಮವಾರ ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಅಜಾದ್ ಪಾರ್ಕ್ ಗಣಪತಿ ಪೆಂಡಾಲ್ಗೆ 89ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಶಾಸಕರ ಪತ್ನಿ ಮಂಗಳ ತಮ್ಮಯ್ಯ ಮಾತನಾಡಿ, ಈ ವರ್ಷದ ಗಣೇಶ ಚತುರ್ಥಿ ನಗರದ ಎಲ್ಲಾ ನಾಗರೀಕರಿಗೆ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪಲ್ಲವಿ ಸಿ.ಟಿ. ರವಿ ಮಾತನಾಡಿ, ವಿಘ್ನವಿನಾಯಕ ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ ಎಂದು ಕೋರಿದರು. ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ, ಆ.27 ರಿಂದ 21 ದಿನಗಳ ಕಾಲ ಶ್ರೀಯವರನ್ನು ಪ್ರತಿಷ್ಠಾಪನೆ ಮಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹರಿಕಥೆ, ಭಜನೆ, ಆರ್ಕೆಸ್ಟ್ರಾ, ಸುಗಮ ಸಂಗೀತ, ಮ್ಯಾಜಿಕ್ ಶೋ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಗಣೇಶೋತ್ಸವದ ಅಂಗವಾಗಿ ಗಣಹೋಮ, ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದು, ಈ ಕಾರ್ಯಕ್ಕೆ ಇಂದು ಭೂಮಿಪೂಜೆಯನ್ನು ಏರ್ಪಡಿಸಲಾಗಿದೆ. ಇಂದಿನಿಂದ ಪೆಂಡಾಲ್ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು. ಪ್ರತಿ ವರ್ಷದಂತೆ ನಗರದ ಬಸವನಹಳ್ಳಿ ರಂಗನಾಥಸ್ವಾಮಿ ದೇವಾಲಯದಿಂದ ಶ್ರೀಯವರನ್ನು ಎಂಜಿ ರಸ್ತೆಯಲ್ಲಿ ಮೆರವಣಿಗೆ ಮೂಲಕ ಪೆಂಡಾಲಿಗೆ ತಂದು ಪ್ರತಿಷ್ಠಾಪಿಸಲಾಗುವುದೆಂದು ತಿಳಿಸಿದರು.
ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಕುಬೇರ, ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಮಂಜುನಾಥ್ ಸೇರಿದಂತೆ 21 ಜನ ನಿರ್ದೇಶಕರುಗಳನ್ನು ಆಯ್ಕೆಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ರೂಪ ಕುಮರ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಕುಬೇರ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.



