ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಆಸಕ್ತಿವಹಿಸಬೇಕೆಂದು ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಪಿ.ಲಿಖಿತ್ ಕರೆನೀಡಿದರು.
ಮಾಚನಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿಕ್ಲಬ್ ಆಯೋಜಿಸಿದ್ದ ಆರೋಗ್ಯ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಲಹೆಗಳನ್ನು ಪಾಲಿಸಿ ಸದೃಢ ನಾಗರಿಕರಾಗಿ ದೇಶವನ್ನು ಬಲಿಷ್ಠಗೊಳಿಸಲು ವಿದ್ಯಾರ್ಥಿಗಳು ಸಂಕಲ್ಪಿಸಬೇಕೆಂದರು.
ಆರೋಗ್ಯವೇ ಭಾಗ್ಯ. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಆರೋಗ್ಯವಂತ ಸ್ಥಿತಿಯಲ್ಲಿ ಕಲಿಕೆ ಪರಿಣಾಮಕಾರಿಯಾಗಿರುತ್ತದೆ. ಮನೆ ಮತ್ತು ಶಾಲಾವರಣದಲ್ಲಿ ನೈರ್ಮಲ್ಯಪಾಲನೆ, ಶಿಸ್ತಿನವರ್ತನೆ ಅತ್ಯಗತ್ಯ. ಯೋಗ, ಧ್ಯಾನ ನಡಿಗೆಯಂತಹ ಸರಳಮಾರ್ಗಗಳಿಂದಲೂ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದೆಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಹದಿಹರೆಯದವರ ದೈಹಿಕ ಆರೋಗ್ಯ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಅಪೌಷ್ಠಿಕತೆ, ಮುಟ್ಟಿನನೈರ್ಮಲ್ಯ ಮತ್ತು ರಕ್ತಹೀನತೆ ನಿವಾರಣೆಗೆ ಕ್ಯಾರೆಟ್, ಬೀಟ್ರೋಟ್, ಸೇಬು ಸೇವನೆ ಉಪಯುಕ್ತ. ಒಳ್ಳೆಯನಿದ್ರೆ, ದಿನಕ್ಕೆ 4ಲೀಟರ್ ನೀರುಸೇವನೆ, ಮೂರುಹೊತ್ತು ಸಮತೋಲಿತ ಆಹಾರ, ಎರಡುಗಂಟೆ ದೈಹಿಕಚಟುವಟಿಕೆಯ ಸೂತ್ರ ಪಾಲಿಸಬೇಕೆಂದರು.
ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ನವೀನಕುಮಾರ್ ಮಾತನಾಡಿ ಮಾನಸಿಕ ಒತ್ತಡವನ್ನು ನಿಭಾಯಿಸಲು ನಿಯಮಿತ ವ್ಯಾಯಾಮ ಮತ್ತು ಧ್ಯಾನ ಪರಿಣಾಮಕಾರಿ. ಖಿನ್ನತೆಯ ಲಕ್ಷಣಗಳಿದ್ದರೆ ಹಿಂಜರಿಯದೆ ತಜ್ಞರ ಸಲಹೆ ಪಡೆಯಬೇಕು. ಸೃಜನಾತ್ಮಕವಾಗ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಮೂಲಕ ಕೆಟ್ಟ ಚಟಗಳಿಂದ ದೂರ ಉಳಿಯಬಹುದೆಂದರು.
ಶಿಕ್ಷಕಿಯರುಗಳಾದ ಸುಜಾತಾ ಸ್ವಾಗತಿಸಿ, ನಳಿನಾಪಟೇಲ್ ವಂದಿಸಿದರು. ಮುಖ್ಯಶಿಕ್ಷಕ ಪ್ರದೀಪ್ ಮಾತನಾಡಿದರು.


