ತಮಿಳುನಾಡಿನ ಕರೂರಿನಲ್ಲಿ ಶನಿವಾರ ರಾತ್ರಿ ನಟ-ರಾಜಕಾರಣಿ ವಿಜಯ್ ಅವರ ತಳಪತಿ ವಿಜಯ್ ಪಕ್ಷ (ಟಿವಿಕೆ) ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಇನ್ನೂ ಹಲವಾರು ಐಸಿಯು ನಲ್ಲಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಮಹಿಳೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮೃತರಲ್ಲಿ 18 ಮಹಿಳೆಯರು ಹಾಗೂ 10 ಮಕ್ಕಳು ಸೇರಿದ್ದಾರೆ. ವೇಲುಸಾಮಿಪುರಂನ 2 ವರ್ಷದ ವಿ. ಗುರು ವಿಷ್ಣು ಅತಿ ಕಿರಿಯ ಸಂತ್ರಸ್ತ ಎಂದು ಗುರುತಿಸಲಾಗಿದೆ. ಮಹಿಳೆಯರಲ್ಲಿ ಹೆಚ್ಚಿನವರು 30ರ ಹರೆಯದವರಾಗಿದ್ದು, ಪುರುಷರು 20–30 ವರ್ಷದವರಾಗಿದ್ದಾರೆ. ಸಂಬಂಧಿಕರು ಮೃತದೇಹಗಳನ್ನು ಗುರುತಿಸಿದ ಬಳಿಕ ಕುಟುಂಬಗಳಿಗೆ ಹಸ್ತಾಂತರಿಸಲಾಗಿದ್ದು, ವಾಹನಗಳಲ್ಲಿ ಸ್ವಗ್ರಾಮಗಳಿಗೆ ಮೃತದೇಹಗಳನ್ನು ಸಾಗಿಸಲಾಯಿತು.
ಟಿವಿಕೆ ರ್ಯಾಲಿಗೆ ಸಾವಿರಾರು ಜನರು ಆಗಮಿಸಿದ್ದರು. ಬಿಸಿಲಿನ ತಾಪಮಾನ ಹೆಚ್ಚಿದ್ದು, ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಜನಸಂದಣಿ ನಿಯಂತ್ರಣ ತಪ್ಪಿ ಕಾಲ್ತುಳಿತ ಸಂಭವಿಸಿದೆ ಎಂದು ತಮಿಳುನಾಡು ಡಿಜಿಪಿ ಜಿ. ವೆಂಕಟರಾಮನ್ ಹೇಳಿದ್ದಾರೆ.



