ಮೂಡಿಗೆರೆ ಕ್ಷೇತ್ರದಲ್ಲಿ ರಸ್ತೆ ದುರಸ್ಥಿ ವಿಚಾರವಾಗಿ ಕೆಲ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ದುರುದ್ದೇಶಪೂರ್ವಕ ಮತ್ತು ಹಾಸ್ಯಾಸ್ಪದ ಎಂದು ಯುವ ಕಾಂಗ್ರೇಸ್ ಮುಖಂಡ ರೋಹಿತ್ ಹೊಸಳ್ಳಿ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ; ಯಾವುದೇ ರಸ್ತೆ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದರೆ ಅದು ಮಳೆಗಾಲ ಸಂಪೂರ್ಣ ಕಡಿಮೆಯಾಗಬೇಕು, ಇದು ಸಾಮಾನ್ಯ ಜ್ಞಾನ, ಮಳೆ ಬರುತ್ತಿರುವಾಗಲೇ ರಸ್ತೆ ದರಸ್ಥಿ ಕೈಗೊಂಡರೆ ಅದು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಇದರ ಅರಿವು ಪ್ರತಿಯೊಬ್ಬರಿಗೂ ಇದೆ. ಆದರೆ ಬಿಜೆಪಿಯ ಕೆಲ ಮುಖಂಡರು ಸರ್ಕಾರದ ವಿರುದ್ಧ ಮತ್ತು ಕ್ಷೇತ್ರದ ಶಾಸಕರ ವಿರುದ್ಧ ರಾಜಕೀಯ ಉದ್ದೇಶದಿಂದ ಆರೋಪ ಮಾಡುತ್ತಿದ್ದಾರೆ.
ಇತ್ತೀಚೆಗೆ ಬಿಜೆಪಿ ಎಸ್ಸಿ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರತನ್ ದೇವರುಂದ ಅವರು ರಸ್ತೆ ದುರಸ್ಥಿ ವಿಚಾರದಲ್ಲಿ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಪ್ರತ್ಯುತ್ತರ ನೀಡಿರುವ ರೋಹಿತ್ ; ರತನ್ ಅವರು ರಸ್ತೆ ದುರಸ್ಥಿ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಆದರೆ ಈಗ ಹಾಳಾಗಿರುವ ಬಹುತೇಕ ರಸ್ತೆಗಳು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವಂತಹವು. ಕಳಪೆ ಕಾಮಗಾರಿ ನಡೆಸಿದ್ದರಿಂದ ರಸ್ತೆಗಳು ಎರಡೇ ವರ್ಷದಲ್ಲಿ ಹೊಂಡ ಗುಂಡಿಗಳಾಗಿ ಪರಿವರ್ತನೆಯಾಗಿವೆ.
ದೇವರುಂದ ಜಪಾವತಿ ರಸ್ತೆ ಇದುವರೆಗೆ ಸಕಲೇಶಪುರ ಲೋಕೋಪಯೋಗಿ ವ್ಯಾಪ್ತಿಯಲ್ಲಿ ಇತ್ತು, ಇದರಿಂದ ರಸ್ತೆ ಅಭಿವೃದ್ದಿ ನೆನೆಗುದಿಗೆ ಬಿದ್ದಿತ್ತು. ಇದೀಗ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮನವರ ಪ್ರಯತ್ನದ ಫಲವಾಗಿ ಈ ರಸ್ತೆ ಮೂಡಿಗೆರೆ ಲೋಕೋಪಯೋಗಿ ವ್ಯಾಪ್ತಿಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಅಲ್ಲದೇ ಈ ರಸ್ತೆ ಅಭಿವೃದ್ದಿಗೆ 3 ಕೋಟಿ ಮತ್ತು ಸೇತುವೆ ಅಭಿವೃದ್ಧಿಗೆ 5 ಕೋಟಿ ಅನುದಾನವನ್ನು ಶಾಸಕರು ನೀಡಿದ್ದಾರೆ. ಸದ್ಯದಲ್ಲಿಯೇ ಕಾಮಗಾರಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಹಾಗೆಯೇ ಕ್ಷೇತ್ರದ ಹಲವು ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿದ್ದು, ಮಳೆನಿಂತ ನಂತರ ದುರಸ್ಥಿ ಮತ್ತು ಅಭಿವೃದ್ದಿ ಕಾರ್ಯ ನಡೆಯಲಿದೆ. ಆದರೆ ಬಿಜೆಪಿಯವರು ಉದ್ದೇಶಪೂರ್ವಕವಾಗಿ ರಸ್ತೆ ವಿಚಾರದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



