ಮೂಡಿಗೆರೆ ಪಟ್ಟಣದಲ್ಲಿ ಇಂದು ಬುಧವಾರ ಬೆಳಿಗ್ಗೆ ನಡೆದಿರುವ ಭೀಕರ ಅಪಘಾತದಲ್ಲಿ ಓರ್ವ ಅಂಗನವಾಡಿ ಶಿಕ್ಷಕಿ ಸಾವನ್ನಪ್ಪಿದ್ದು, ಇನ್ನೋರ್ವ ಅಂಗನವಾಡಿ ಶಿಕ್ಷಕಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಮೂಡಿಗೆರೆ ಹೆಸಗಲ್ ರಸ್ತೆಯಲ್ಲಿ ಹೊಯ್ಸಳ ಕ್ರೀಡಾಂಗಣದ ಸಮೀಪ ಈ ದುರ್ಘಟನೆ ನಡೆದಿದೆ. ಕ್ರೇನ್ ಒಂದು ಸ್ಕೂಟಿ ಮೇಲೆ ಎರಗಿ ಬಂದ ಪರಿಣಾಮ ಓರ್ವ ಶಿಕ್ಷಕಿ ಸಾವನ್ನಪ್ಪಿದ್ದು, ಇನ್ನೋರ್ವ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಡಿಗೆರೆ ತಾಲ್ಲೂಕು ಚಿಕ್ಕಳ್ಳ ಹಳ್ಳದಗಂಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಸಂಪ್ರೀತಾ (28 ವರ್ಷ) ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವರು ಕಡೆಮಾಡ್ಕಲ್ ಅಂಗನವಾಡಿ ಶಿಕ್ಷಕಿ ಸುಜಾತ (35 ವರ್ಷ) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಇಂದು ಬೆಳಿಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕ್ರೇನ್ ಒಂದು ನಿಯಂತ್ರಣ ತಪ್ಪಿ ಮೂಡಿಗೆರೆ ಸಂತೆ ರಸ್ತೆಯ ಇಳಿಜಾರಿನಲ್ಲಿ ಹಿಮ್ಮುಖವಾಗಿ ಬಂದಿದ್ದು, ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಮತ್ತು ಅದರಲ್ಲಿ ಚಲಿಸುತ್ತಿದ್ದ ಇಬ್ಬರು ಅಂಗನವಾಡಿ ಶಿಕ್ಷಕಿಯರು ಕ್ರೇನ್ ಅಡಿಗೆ ಸಿಲುಕಿಕೊಂಡರು. ಪರಿಣಾಮ ಕ್ರೇನ್ ಚಕ್ರದಡಿಗೆ ಸಿಲುಕಿದ ಸಂಪ್ರೀತಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಜಾತ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಪ್ರೀತಾ ಮೂಡಿಗೆರೆ ಸಮೀಪದ ಶಕ್ತಿನಗರ ವಾಸಿಯಾಗಿದ್ದು, ಅವಿವಾಹಿತೆ, ಕಳೆದ ವಾರವಷ್ಟೇ ಇವರು ಗೃಹ ಪ್ರವೇಶ ನೆರವೇರಿಸಿದ್ದರು. ಮೂಡಿಗೆರೆ ಟಿಎಪಿಸಿಎಂಎಸ್ ಉದ್ಯೋಗಿ ಅಣ್ಣು ಅವರ ತಮ್ಮನ ಮಗಳು.

ಗಾಯಗೊಂಡಿರುವ ಸುಜಾತ ಹೆಸಗಲ್ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರವಿ ಎಂಬುವವರ ಪತ್ನಿ, ಎರಡು ಮಕ್ಕಳಿದ್ದು, ಒಂದು ಮಗು ಇನ್ನೂ ಒಂದು ವರ್ಷದ್ದು ಎನ್ನಲಾಗಿದೆ.
ಇವರಿಬ್ಬರು ಇಂದು ಉದ್ಘಾಟನೆಗೊಂಡ ಹೆಸಗಲ್ ಗ್ರಾಮ ಪಂಚಾಯಿತಿ ಕಟ್ಟಡದ ಕಾರ್ಯಕ್ರಮದ ವೇದಿಕೆ ಮುಂಭಾಗ ರಂಗೋಲಿ ಬಿಡಿಸಿ ನಂತರ ಮನೆಗೆ ತೆರಳಿ ಮೂಡಿಗೆರೆ ಕಡೆಗೆ ಬರುತ್ತಿದ್ದರು ಎನ್ನಲಾಗಿದ. ಬಲ್ಲ ಮೂಲಗಳ ಪ್ರಕಾರ ಇವರು ಜಾತಿಗಣತಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಷ್ಟೆ. ಕ್ರೇನ್ ನಿಯಂತ್ರಣ ಕಳೆದುಕೊಂಡಿರುವುದಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಕ್ರೇನ್ ಚಾಲಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.



