ಗಬ್ಬೆದ್ದು ನಾರುತ್ತಿರುವ ಮೂಡಿಗೆರೆ ಪಟ್ಟಣದ ವಾರ್ಡ್ ನಂ.9 ರ ಜೆ.ಎಂ ರಸ್ತೆ, ಹೋಟೇಲ್ ಗಳ ಗಲೀಜು ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ, ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಜ್ವಾನ್ ಹುಸೇನ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ; ಮೂಡಿಗೆರೆ ಪಟ್ಟಣದ ವಾರ್ಡ್ ನಂ. 9 ರ ಜೆ.ಎಂ ರಸ್ತೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಮನೆಗಳಿಂದ ಹೊರಬಂದರೆ ಸಾಕು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಪಟ್ಟಣದ ಕೆ.ಎಂ ರಸ್ತೆಯಲ್ಲಿರುವ ಕೆಲವೊಂದು ಹೋಟೇಲ್ ಗಳ ತ್ಯಾಜ್ಯ, ಗಲೀಜು ನೀರು ದೊಡ್ಡ ದೊಡ್ಡ ಪೈಪ್ ಗಳ ಮುಖಾಂತರ ಇಲ್ಲಿನ ಚರಂಡಿಗಳಿಗೆ ಹರಿಯುತ್ತಿರುವುದರಿಂದ ಚರಂಡಿಗಳಲ್ಲಿ ತ್ಯಾಜ್ಯ ಹಾಗೂ ಗಲೀಜಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಅಷ್ಟಲ್ಲದೆ ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಆಸ್ಪತ್ರೆಯೂ ಸಹ ಇದ್ದು ದಿನನಿತ್ಯ ಹಲವಾರು ಜನರು ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ನೀರಿನ ಪೈಪ್ ಲೈನ್ ಕಾಮಗಾರಿಗೆ ಅಗೆದ ನಂತರ ಸರಿಯಾಗಿ ಗುಂಡಿ ಮುಚ್ಚದೆ ದೊಡ್ಡ ದೊಡ್ಡ ಕಲ್ಲು ಮಣ್ಣು ಚರಂಡಿಯಲ್ಲಿ ಬಿದ್ದು ನಿರ್ವಹಣೆ ಆಗದೆ ಹೂಳು ತುಂಬಿ ತುಳುಕುತ್ತಿದೆ, ಮಳೆಯ ನೀರು ರಸ್ತೆಯ ಮೇಲೆ ಹರಿದು ಅಕ್ಕಪಕ್ಕದ ಮನೆಯಂಗಳಕ್ಕೆ ಬರುತ್ತಿದೆ.

ಜನರು ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿದ್ದು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲಿನ ಜನಪ್ರತಿನಿಧಿಗಳಿಗೆ ಈ ವಿಚಾರದಲ್ಲಿ ಈ ಹಿಂದೆಯೂ ಸಹ ಹಲವಾರು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಮೂಡಿಗೆರೆಯ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಇಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.



