ಕೆಪಿಟಿಸಿಎಲ್ನಲ್ಲಿ ಹೊರ ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಅರ್ಹ ನೌಕರರನ್ನು ಒಳ ಗುತ್ತಿಗೆ ಆಧಾರದಲ್ಲಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯಿದಿಂದ ಸಾಧ್ಯವಾಗದಂತಾಗಿದೆ ಎಂದು ರಾಜ್ಯ ಕೆಪಿಟಿಸಿಎಲ್ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಭರತ್ ಹೇಳಿದರು.
ಅವರು ಭಾನುವಾರ ಮೂಡಿಗೆರೆ ಪಟ್ಟಣದಲ್ಲಿ ರಾಜ್ಯ ಕೆಪಿಟಿಸಿಎಲ್ ಹೊರ ಗುತ್ತಿಗೆ ನೌಕರರ ತಾಲೂಕು ಘಟಕದ ವಾರ್ಷಿಕೋತ್ಸವ ಆಚರಣೆ ಬಗ್ಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕೆಪಿಟಿಸಿಎಲ್ನಲ್ಲಿ ಸುಮಾರು 23 ಸಾವಿರ ಹೊರ ಗುತ್ತಿಗೆದಾರರು ಮೀಟರ್ ರೀಡರ್, ಲೈನ್ ಮ್ಯಾನ್, ಗ್ಯಾಂಗ್ ಮ್ಯಾನ್, ಸ್ಟೇಷನ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 20 ವರ್ಷದಿಂದ ಮಳೆ, ಗಾಳೆ ಎನ್ನದೇ ಜೀವದ ಹಂಗು ತೊರೆದು ಕೆಲಸ ಮಾಡುವವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ ಎಂದು ಹೇಳಿದರು.
ಒಳ ಗುತ್ತಿಗೆಗಾಗಿ ಇಂದನ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದು, ಪೂರಕ ಸ್ಪಂಧನೆ ಸಿಕ್ಕಿದ್ದರೂ ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಒಳಗುತ್ತಿಗೆ ನೇಮಕ ಮಾಡಲು ನ್ಯಾಯಾಲಯ ಸರಕಾರಕ್ಕೆ ಚಾಟಿ ಬೀಸಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಆದೇಶ ನೀಡಿದ್ದಾರೆ. ಆದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡು ಸರಕಾರದ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸಧ್ಯದಲ್ಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಅಧಿಕಾರಿಗಳ ಕಳ್ಳಾಟವನ್ನು ವಿವರಿಸಲಿದ್ದೇವೆ. ನಂತರವೂ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಸಂಘದ ತಾಲೂಕು ಉಪಾಧ್ಯಕ್ಷ ಎಂ.ಆರ್.ಕೃಷ್ಣ, ಕಾರ್ಯದರ್ಶಿ ಆರ್.ಆನಂದ್ರಾವ್, ಸಹ ಕಾರ್ಯದರ್ಶಿ ಎ.ಎನ್.ನವೀನ್, ಮುಖಂಡರಾದ ಗೋಪಾಲ, ಪಾಲಾಕ್ಷ, ಬಿ.ಸಿ.ರಂಜಿತ್, ಎಂ.ಎಚ್.ಶಶಿಕುಮಾರ್ ಉಪಸ್ಥಿತರಿದ್ದರು.
*****



