ರಸ್ತೆ ದಾಟುತ್ತಿದ್ದ ಕಾಡಾನೆಗೆ ಕಾರು ಡಿಕ್ಕಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ 9ನೇ ಮೈಲಿಗಲ್ಲಿನ ಸಮೀಪದ ಬುಡಗಮನೆ ಗ್ರಾಮದ ಬಳಿ ನಡೆದಿದೆ.
9ನೇ ಮೈಲಿಗಲ್ಲು ಸಮೀಪದ ಚಿಕ್ಕ ಅಗ್ರಹಾರ ಅರಣ್ಯ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದವು. ಒಂದು ಕಾಡಾನೆ ರಸ್ತೆ ದಾಟಿದ್ದು ಮತ್ತೊಂದು ರಸ್ತೆ ದಾಟುವಾಗ ತಿರುವಿನಲ್ಲಿ ಬಂದಂತಹ ಕಾರು ಆನೆಗೆ ಡಿಕ್ಕಿ ಹೊಡೆದಿದೆ. ಕಾರು ಆನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆ ಕಾರಿನ ಮೇಲೆಯೇ ಬಿದ್ದಿದೆ. ಇದರಿಂದ ಕಾರಿನ ಮುಂಭಾಗ ಬಹುತೇಕ ಜಖಂಗೊಂಡಿದೆ.
ಕೂಡಲೇ ಎದ್ದು ನಿಂತ ಕಾಡಾನೆ ಕಾರಿನ ಮೇಲೆ ಯಾವುದೇ ಪ್ರತಿರೋಧ ತೋರದೆ ಕಾಡಿನೊಳಗಡೆ ಓಡಿ ಹೋಗಿದೆ. ಕಾರಿನಲ್ಲಿ ಮೂವರು ಯುವಕರು ಪ್ರಯಾಣಿಸುತ್ತಿದ್ದು ತಿರುವಿನಲ್ಲಿ ಆನೆಯನ್ನ ನೋಡಿದ ಕೂಡಲೇ ಹುಡುಗರು ಗಾಬರಿಗೊಂಡು ಆನೆಗೆ ಡಿಕ್ಕಿ ಹೊಡೆಸಿದ್ದಾರೆ. ಆನೆ ಯಾವುದೇ ಪ್ರತಿರೋಧ ತೋರದ ಕಾರಣ ಅದೃಷ್ಟಾವಶಾತ್ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಗೂ ಬಲವಾದ ಪೆಟ್ಟಾಗಿದ್ದು, ಅದು ಅರಣ್ಯದಲ್ಲಿ ಕಣ್ಮರೆಯಾಗಿದೆ.
ಎನ್.ಆರ್.ಪುರದಿಂದ ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.



