ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಡಿಸೆಂಬರ್ 2ರಂದು ಮೂಡಿಗೆರೆ ಪಟ್ಟಣದಲ್ಲಿ ಸಂಜೆ 4 ಗಂಟೆಗೆ ದತ್ತಮಾಲಾ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಮೂಡಿಗೆರೆ ತಾಲೂಕು ಅಧ್ಯಕ್ಷ ಸುದೇವ್ ಗುತ್ತಿ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ದತ್ತ ಜಯಂತಿ ಅಂಗವಾಗಿ ಬುಧವಾರ ಬೆಳಗ್ಗೆ ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ 60ಕ್ಕೂ ಅಧಿಕ ಮಂದಿ ದತ್ತ ಮಾಲೆ ಧರಿಸಿದ್ದು, ತಾಲೂಕಿನಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತ ಮಾಲೆ ಧರಿಸಲಿದ್ದಾರೆ. ಡಿ.2ರಂದು ಗಂಗನಮಕ್ಕಿ ಗಣಪತಿ ದೇವಸ್ಥಾನದಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವರೆಗೆ ಬೈಕ್ ಜಾತದ ಮೂಲಕ ಮೆರವಣಿಗೆ ನಡೆಸಿ, ಬಳಿಕ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಧತ್ತಮಾಲಾ ಸಂಕೀರ್ತನಾ ಸಭೆ ನಡೆಯಲಿದೆ. ಸಭೆಯಲ್ಲಿ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗಮಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ದತ್ತ ಜಯಂತಿ ಸಂದರ್ಭದಲ್ಲಿ ನಾವು ಭಕ್ತಿ ಮಾರ್ಗದಿಂದ ದತ್ತಪೀಠಕ್ಕೆ ತೆರಳುತ್ತೇವೆ ಹೊರತು, ಯಾರಿಗೂ ತೊಂದರೆ ಕೊಡುವ ಮನೋಭಾವ ಯಾರಲ್ಲೂ ಇಲ್ಲ. ಆದರೆ ಹಿಂದೂ ಸಂಘಟನೆಗಳ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಲು ಕಳೆದ 4 ವರ್ಷದಿಂದ ರಾಜ್ಯ ಸರಕಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ತೊಂದರೆ ಮಾಡುತ್ತಿದೆಗೀ ಪ್ರಕ್ರಿಯೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಕೈ ಬಿಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಬಜರಂಗದಳ ತಾಲೂಕು ಸಂಯೋಜಕ ಸಂತೋಷ್, ಸಹ ಸಂಯೋಜಕ ಪ್ರಣಿತ್, ಜಿಲ್ಲಾ ಗೋರಕ್ಷಾ ಪ್ರಮುಖ್ ಅಜಿತ್ ಜೇನುಬೈಲ್ ಉಪಸ್ಥಿತರಿದ್ದರು.



