ಕಾಫಿ ಬೆಳೆಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾಫಿ ಬೆಳೆ ಕಳವು ಮಾಡಿದ್ದ ಐವರು ಕಳ್ಳರು ಮತ್ತು ಕಳ್ಳನತ ಮಾಡಿದ ಕಾಫಿಯನ್ನು ಖರೀದಿಸಿದ್ದ ಓರ್ವ ಕಾಫಿ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅರೇಹಳ್ಳಿ ಗ್ರಾಮದ ಶಾಹಿದ್ ಮುಬಾರಕ್ (19) ಜಹೀರ್ (32), ಸಾಗರ್ (21), ಪಜ್ವಲ್ (21), ಹಜೀಜ್ (22) ಹಾಗೂ ಸುನೀಲ್ (35) ಎಂದು ಗುರುತಿಸಲಾಗಿದೆ. ವ್ಯಾಪಾರಿ ಸುನೀಲ್, ಕಳ್ಳತನ ಮಾಡಿದ್ದ ಕಾಫಿ ಎಂದು ತಿಳಿದಿದ್ದರೂ ಖರೀದಿಸಿದ್ದ.
ಡಿಸೆಂಬರ್ 11 ರಂದು ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಜಗನ್ನಾಥ್ ಶೆಟ್ಟಿ ಎನ್ನುವವರ ಕಣದಲ್ಲಿ ಹರಡಿದ್ದ ಕಾಫಿಯನ್ನು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಲು ಬಂದಾಗ ಕಾಫಿ ಕಳ್ಳತನ ತಡೆಯಲು ಹೋದ ಜಗನ್ನಾಥ್ ಶೆಟ್ಟಿಯವರ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಬಳಿಕ ಭಾರೀ ಪ್ರಮಾಣದ ಕಾಫಿ ಹಣ್ಣುಗಳನ್ನು ಕಳ್ಳತನ ಮಾಡಿದ್ದರು. ನಂತರ ಬೆಳಗಿನ ಜಾವ ಮತ್ತೆ ಬಂದು ಉಳಿದ ಕಾಫಿಯನ್ನು ತುಂಬಿಸಿಕೊಂಡು ಹೋಗಿದ್ದರು.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇನ್ಸ್ಪೆಕ್ಟರ್ ಜಗದೀಶ್, ಕಾನ್ಸ್ಟೇಬಲ್ಗಳಾದ ಶಶಿ, ನಂದೀಶ್, ಮಂಜುನಾಥ್ ಹಾಗೂ ಸಿಬ್ಬಂದಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



