ರೈತರ ಕೃಷಿ ಜಮೀನಿನಲ್ಲಿ 10 ಎಚ್ಪಿ ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ದ್ವಂದ್ವ ನಿಲುವು ಇರುವುದರಿಂದ ಇದೀಗ ಬಿಲ್ ನೋಟಿಸ್ ನೀಡುತ್ತಿದ್ದ ಹಿನ್ನಲೆಯಲ್ಲಿ ಶನಿವಾರ ರೈತರು ಮೂಡಿಗೆರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಎಇಇ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಅಮರ್ನಾಥ್ ಮಾತನಾಡಿ, ಈ ಹಿಂದಿನ ಸರಕಾರ 10 ಎಚ್ಪಿ ವರೆಗೆ ಕೃಷಿ ನೀರಾವರಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುತ್ತಿತ್ತು. ಇದರಿಂದ ರೈತರು ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಆದರೆ ಹಿಂದಿನ ಆದೇಶವನ್ನು ಕಾಂಗ್ರೆಸ್ ಸರಕಾರ ಮುಂದುವರೆಸಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಸರಕಾರದಿಂದ ಮೌಖಿಕ ಆದೇಶವಿದೆ ಎಂದು ಅಧಿಕಾರಿಗಳು ವಿದ್ಯುತ್ ಬಿಲ್ ಕಟ್ಟಬೇಕೆಂದು ನೋಟಿಸ್ ನೀಡುತ್ತಿದ್ದಾರೆ. ಬಿಲ್ ಕಟ್ಟದಿದ್ದರೆ ಪಂಪ್ಸೆಟ್ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆಂದು ದೂರಿದರು.
ಕೃಷಿಕ ಡಿ.ಕೆ.ಲಕ್ಷ್ಮಣ್ಗೌಡ ಮಾತನಾಡಿ, ಈ ಬಗ್ಗೆ ಹಿಂದೆ ಕೂಡ ಪ್ರತಿಭಟನೆ ನಡೆಸಿ ಸರಕಾರದ ಆದೇಶ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಬಿಲ್ ವಸೂಲಿ ಮತ್ತು ವಿದ್ಯುತ್ ಕಡಿತ ಕಾರ್ಯಾ ಸ್ಥಗಿತಗೊಳಿಸಲಾಗಿತ್ತು. ಆದರೆ ಈ ಬಾರಿ ಮತ್ತೆ ನೋಟಿಸ್ ನೀಡಲಾಗುತ್ತಿದೆ. ಇಂತಹ ದ್ವಂದ್ವ ನಿಲುವು ಬಗೆಹರಿಸಿಕೊಳ್ಳಲು ಬಗ್ಗೆ ಮೆಸ್ಕಾಂ ಅಧಿಕಾರಿಗಳು ಸರಕಾರದ ಆದೇಶವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಒಂದು ವೇಳೆ ಯಾವುದೇ ನಿಯಮವಿಲ್ಲದೇ ಸುಖಾ ಸುಮ್ಮನೇ ವಿದ್ಯುತ್ ಕಡಿತಗೊಳಿಸಿದರೆ ಮುಂದಿನ ದಿನದಲ್ಲಿ ಮೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸುನೀಲ್ ಮೇಗಲಪೇಟೆ, ರಾಮೇಗೌಡ ಬೀಜವಳ್ಳಿ, ಶೇಷಪಾಲ್ ಗೋಣಿಬೀಡು, ಪ್ರಕಾಶ್ ಬಕ್ಕಿ ಮತ್ತಿತರರಿದ್ದರು.



