ಅಡಿಕೆ ಕಳವು ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು ಅಂದಾಜು ರೂ 2,56,000-00 ಮೌಲ್ಯದ 44 ಕ್ವಿಂಟಲ್ ಅಡಿಕೆ ವಶಪಡಿಸಿಕೊಂಡಿದ್ದಾರೆ.
ಕೃತ್ಯಕ್ಕೆ ಉಪಯೋಗಿಸಿದ KA27C5437 ನಂಬರಿನ ಬೊಲೆರೋ ಪಿಕಪ್ ವಾಹನ , ಒಂದು ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕಳಸ ತಾಲ್ಲೂಕು ಹೆಮ್ಮಕ್ಕಿ ಗ್ರಾಮದ ಭದ್ರಾ ಸೈಟ್ ನಿವಾಸಿ ಅಡಿಕೆ ಚೇಣಿ ವ್ಯಾಪಾರ ಮಾಡುವ ಕೆ.ರವಿ ಕಳಸ ಸಮೀಪದ ಕಾರ್ಗದ್ದೆ ಸಂತೋಷ್ ಗೌಡ ಅವರಿಂದ ಹಸಿ ಅಡಿಕೆ ಖರೀದಿಸಿ ಪಿಕಪ್ ವಾಹನದಲ್ಲಿ 67 ಚೀಲ ಅಡಿಕೆ ಕಾಯಿಗಳನ್ನು ತುಂಬಿಕೊಂಡು ಭದ್ರಾವತಿ ಕಡೆಗೆ ಚಾಲಕ ವಿಶ್ವಾಸ್ ಅವರೊಂದಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಡಿಸೆಂಬರ್ 12ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಬಾಳೆಹೊನ್ನೂರು ಎನ್.ಆರ್.ಪುರ ರಸ್ತೆಯಲ್ಲಿ ರಸ್ತೆಯಲ್ಲಿ ಬರುವ ಅಳೇಹಳ್ಳಿಯ ಹತ್ತಿರ ಹಿಂಬದಿಯಲ್ಲಿ ಒಂದು ಪಿಕಪ್ ವಾಹನ & ಹೀರೋಹೊಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ಆರೋಪಿತರು ಬಂದು ವಾಹನವನ್ನು ಅಡ್ಡ ಗಟ್ಟಿದ್ದಾರೆ. ವಾಹನದ ಬಾಗಿಲ ಹತ್ತಿರ ಬಂದು ಕತ್ತಿ ಮತ್ತು ರಾಡಿನಿಂದ ಗ್ಲಾಸ್ ಒಡೆದು ಕುತ್ತಿಗೆಗೆ ಕತ್ತಿಯನ್ನು ಇಟ್ಟು ಅವಾಚ್ಯವಾಗಿ ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಿ 29,000/- ರೂ ಹಣ ಕಸಿದಿದ್ದಾರೆ. ಜೊತೆಯಲ್ಲಿದ್ದ ಪಿಕ್ಅಪ್ ವಾಹನ ಚಾಲಕ ವಿಶ್ವಾಸ್ ನಿಗೂ ಬೆದರಿಕೆ ಹಾಕಿ ಬಿ.ಹೆಚ್. ಕೈಮರ ಮಾರ್ಗವಾಗಿ ಕುದುರೆಗುಂಡಿಯ ಕಡೆ ಕಾಡುದಾರಿಯಲ್ಲಿ ವಾಹನವನ್ನು ನಿಲ್ಲಿಸಿ ನಾಲ್ಕೂ ಜನ ಆರೋಪಿತರು ಅಡಿಕೆ ಚೀಲಗಳನ್ನು ಅವರ ವಾಹನಕ್ಕೆ ಲೋಡ್ ಮಾಡಿಕೊಂಡು ಹೋಗಿದ್ದರು.
29,000/-ರೂ, 44 ಕ್ವಿಂಟಾಲ್ ಹಸಿ ಅಡಿಕೆ, ಹಾಗೂ 2 ಮೊಬೈಲ್ ಗಳನ್ನು ಡಕಾಯಿತಿ ಮಾಡಿದ್ದು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ ಪೊಲೀಸರು ಭದ್ರಾವತಿ ಆಗರದಹಳ್ಳಿ ಕ್ಯಾಂಪ್ ನ ವೀರೇಶ್, ಮಹೇಶ ,ಕಾರ್ತಿಕ , ಸಿದ್ದರ ಕಾಲೋನಿಯ ಶ್ರೀಹರಿ ಆರ್ ನನ್ನ ಬಂಧಿಸಿ ಅಡಿಕೆ ಮತ್ತು ವಾಹನ ವಶಪಡಿಸಿಕೊಂಡಿದ್ದಾರೆ.



