ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಕಾಫಿತೋಟದ ಕೃಷಿಹೊಂಡವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ನಿವಾಸಿ ನವೀದ್ (28) ದಿನಾಂಕ ಜನವರಿ 8ರಂದು ಕಾಣೆಯಾಗಿದ್ದರು. ಮನೆಗೆ ವಾಪಸ್ಸು ಬರದ ಹಿನ್ನೆಲೆ ಕೆಲ ದಿನಗಳ ಕಾಲ ಹುಡುಕಾಟ ನಡೆಸಿದ ಮನೆಯ ಸದಸ್ಯರು 12.01.2026 ರಂದು ಆಲ್ದೂರು ಪೊಲೀಸ್ ಠಾಣೆಯಲ್ಲಿ ನವೀದ್ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು.
ಸೂರಪ್ಪನಹಳ್ಳಿ ಬಸವರಾಜಪ್ಪ ಎಂಬುವವರ ಕಾಫಿ ತೋಟದಲ್ಲಿ ನಿರ್ಮಿಸಿರುವ ಕೃಷಿಹೊಂಡದಲ್ಲಿ ನವೀದ್ ಮೃತ ದೇಹ ಗುರುವಾರ ಪತ್ತೆಯಾಗಿದೆ. ಕೆಸರು ಮಿಶ್ರಿತ ಹೊಂಡದಿಂದ ಶವವನ್ನು ಆಲ್ದೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಕೆ ಎಲ್ ಕುಮಾರ್ ಮತ್ತು ಸದಸ್ಯರಾದ ಅನಿಲ್ ಕುಮಾರ್ ನಾಗರಾಜ್ ರವರ ನೆರವಿನೊಂದಿಗೆ ಶವವನ್ನು ಹೊರತೆಗೆಯಲಾಗಿದೆ.
ನವೀದ್ ಸಹೋದರ ಫಯಾಜ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ರವಿ ಜಿಎ, ಮೂರ್ತಪ್ಪ, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನವೀದ್ ಸಾವಿನ ಬಗ್ಗೆ ಅನುಮಾನಗಳು ಮೂಡಿದ್ದು, ಇದು ಆತ್ಮಹತ್ಯೆಯೋ ? ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸ್ ತನಿಖೆಯಿಂದ ಸಾವಿನ ರಹಸ್ಯ ಬಯಲಾಗಬೇಕಾಗಿದೆ.



