ಭೀಮ್ ಆರ್ಮಿಯ ನೂತನ ಜಿಲ್ಲಾಧ್ಯಕ್ಷರ ನೇಮಕಾತಿಯನ್ನು ಅಸಿಂಧುಗೊಳಿಸಿ ರಾಜ್ಯಾಧ್ಯಕ್ಷ ರಾಜಗೋಪಾಲ್ ಆದೇಶಿಸಿದ್ದಾರೆ ಎಂದು ಭೀಮ್ ಆರ್ಮಿ ಹಾಲಿ ಜಿಲ್ಲಾಧ್ಯಕ್ಷ ಗಿರೀಶ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷನಾಗಿರುವ ತಾನು ಕಳೆದ 5 ವರ್ಷಗಳಿಂದ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದೇನೆ. ಇತ್ತೀಚೆಗೆ ನೂತನ ಜಿಲ್ಲಾಧ್ಯಕ್ಷರ ಚುನಾವಣೆ ನಡೆಯುವ ಸಂದರ್ಭದಲ್ಲಿ ಭೀಮ್ ಆರ್ಮಿಯ ರಾಜ್ಯ ಉಪಾಧ್ಯಕ್ಷೆ ತಬಸುಮ್ ಅವರು ರಾಜ್ಯಾಧ್ಯಕ್ಷರ ಅನುಮತಿ, ಗಮನಕ್ಕೆ ತಾರದೇ ಚುನಾವಣೆ ನಡೆಸಿದ್ದಾರೆ ಎಂದರು.
ಹಳೆಯ ಜಿಲ್ಲಾ ಸಮಿತಿಯನ್ನು ನಿಷ್ಕ್ರೀಯ ಮಾಡಿ 6 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚನೆ ಮಾಡಿ ನೋಂದಣಿ ಮಾಡಲು ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದರೂ ರಾಜ್ಯ ಉಪಾಧ್ಯಕ್ಷೆ ಚುನಾವಣೆಯ ಬಗ್ಗೆ ಪೂರ್ವ ಮಾಹಿತಿಯನ್ನು ಸಮಿತಿ ಗಮನಕ್ಕೆ ತಾರದೇ ಕೆಲವೇ ಕೆಲವು ಸದಸ್ಯರ ಗಮನಕ್ಕೆ ತಂದು ಕೇವಲ 24 ಗಂಟೆಗಳ ಒಳಗೆ ಚುನಾವಣೆ ಪ್ರಕ್ರಿಯೆ ಮಾಡಿ ಹೊನ್ನೇಶ್ ಅವರನ್ನು ನೂತನ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಈ ನಿಯಮ ಬಾಹಿರ ಚುನಾವಣೆ ಬಗ್ಗೆ ತಾವು ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದು, ದೂರನ್ನು ಪರಿಶೀಲಿಸಿದ ರಾಜ್ಯಾಧ್ಯಕ್ಷರು ಹೊನ್ನೇಶ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದಾರೆ ಎಂದು ಹೇಳಿದರು.
ಅಲ್ಲದೇ ನೂತನ ಜಿಲ್ಲಾಧ್ಯಕ್ಷರ ಚುನಾವಣೆಯನ್ನು ನ್ಯಾಯಯುತವಾಗಿ ಚುನಾವಣಾಧಿಕಾರಿಗಳ ಮೂಲಕ ನಡೆಯುವವರೆಗೂ ಹಾಲಿ ಅಧ್ಯಕ್ಷನಾಗಿರುವ ತನ್ನನ್ನೇ ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷನನ್ನಾಗಿ ಮುಂದುವರಿಯಲು ತಿಳಿಸಿ ಆದೇಶಿಸಿದ್ದಾರೆ ಎಂದರು.
ಭೀಮ್ ಆರ್ಮಿ ಸಂಘಟನೆಯ ಹೆಸರಿನಲ್ಲಿ ತನ್ನ ನೇತೃತ್ವದ ಸಂಘಟನೆಯಲ್ಲದೇ ಬೇರೆ ಯಾರಾದರೂ ಕಾರ್ಯಕ್ರಮಗಳನ್ನು ಮಾಡುವುದು, ಸಂಘಟನೆಯ ಹೆಸರು ಬಳಸಿಕೊಂಡು ಪ್ರಚಾರ ಪಡೆಯುವುದನ್ನು ಮುಂದುವರಿಸಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಸುಚಿತ್, ರಾಕೇಶ್, ಸುರೇಶ್, ಮಂಜುನಾಥ್, ನಿಶ್ಚಲ್, ಹರೀಶ್ ಮತ್ತಿತರರಿದ್ದರು.



