ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋದ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಶಿವಮೊಗ್ಗದ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ನಲ್ಲಿ ಭಾನುವಾರ ನಡೆದಿದೆ. ಅರಬಿಳಚಿ ಕ್ಯಾಂಪ್ನ ನಿವಾಸಿ ನೀಲಬಾಯಿ (50), ಮಗ ರವಿ ಕುಮಾರ್ (21), ಮಗಳು ಶ್ವೇತಾ (28) ಹಾಗೂ ಅಳಿಯ ಪರಶುರಾಮ (33) ನೀರು ಪಾಲಾದವರು.
ಮಾರಿ ಜಾತ್ರೆಗೆ ಮಗಳು ಹಾಗೂ ಅಳಿಯ ಬಂದಿದ್ದರು. ಜಾತ್ರೆ ಮುಗಿಸಿ ಭದ್ರಾ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾರೆ. ಓರ್ವ ನೀರಿನ ಸೆಳೆತಕ್ಕೆ ಸಿಲುಕಿದ್ದು, ಆತನನ್ನು ರಕ್ಷಿಸಲು ಹೋಗಿ ನಾಲ್ವರೂ ಕೊಚ್ಚಿಕೊಂಡು ಹೋಗಿರುವ ಅನುಮಾನ ವ್ಯಕ್ತವಾಗಿದೆ.
ಮೊದಲು ಭದ್ರಾ ಕಾಲುವೆ ಬಳಿ ಎರಡು ಬೈಕ್ ಹಾಗೂ ಬಟ್ಟೆ ಪತ್ತೆಯಾಗಿತ್ತು. ಆದರೆ ಯಾರೂ ಇಲ್ಲದೆ ಇರುವುದನ್ನು ಕಂಡು ಸ್ಥಳೀಯರು ನೀಲಬಾಯಿ ಅವರ ಪತಿ ರಾಜರಾವ್ ಅವರಿಗೆ ವಿಷಯ ತಿಳಿಸಿದ್ದಾರೆ. ಅವರು ಕಾಲುವೆ ಬಳಿ ಬಂದು ನೋಡಿದಾಗ ಪತ್ನಿ, ಮಗ, ಮಗಳು ಹಾಗೂ ಅಳಿಯ ಅವರು ಬಟ್ಟೆ ತೊಳೆಯಲು ಬಂದಿದ್ದರು ಎಂದು ತಿಳಿಸಿದ್ದಾರೆ.
ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸುತ್ತಿದ್ದಾರೆ.



