ಸಾಂದರ್ಭಿಕ ಚಿತ್ರ
ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಕಾಫಿ ಎಸ್ಟೇಟ್ ನಲ್ಲಿ ಸುತ್ತಾಡುತ್ತಿದ್ದ ಕಾವಲು ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಕೊಂದು ಹಾಕಿದೆ.
ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಸಿದ್ದಾಪುರ ಬಳಿಯ ಬಡಗ-ಬಣಂಗಾಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಎಸ್ಟೇಟ್ನ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಲತೀಫ್ (72) ಎಂಬುವವರನ್ನು ಕಾಡಾನೆ ತುಳಿದು ಸಾಯಿಸಿದೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಊಟದ ಸಮಯದಲ್ಲಿ, ಲತೀಫ್ ಎಸ್ಟೇಟ್ನಲ್ಲಿ ಸುತ್ತಾಡುತ್ತಿದ್ದಾಗ ಕಾಡಾನೆಯೊಂದು ಎದುರಾಗಿದ್ದು, ಈ ವೇಳೆ ಕಾಡಾನೆ ಅವರ ಮೇಲೆ ದಾಳಿ ಮಾಡಿ ತುಳಿದು ಹಾಕಿದೆ. ಹತ್ತಿರದಲ್ಲೇ ಇದ್ದ ಇತರೆ ಕಾರ್ಮಿಕರು ದಾಳಿಯಿಂದ ಪಾರಾಗಿದ್ದಾರೆ.
ತೀವ್ರ ಗಾಯಗೊಂಡಿದ್ದ ಲತೀಫ್ ಅವರನ್ನು ಸಿದ್ದಾಪುರ ಆರೋಗ್ಯ ರಕ್ಷಣಾ ಕೇಂದ್ರಕ್ಕೆ ಕರೆದೊಯ್ಯುವಾಗ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ವಿರಾಜಪೇಟೆ ಆರ್ಎಫ್ಒ ಕೆ.ವಿ. ಶಿವರಾಮ್ ಸೇರಿದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗ್ಗೆ ಕೆಲ ದಿನಗಳ ಹಿಂದಷ್ಟೇ ಸಕಲೇಶಪುರ ಸಮೀಪ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದೀಗ ಮತ್ತೊಂದು ಜೀವ ಕಾಡಾನೆ ದಾಳಿಗೆ ಬಲಿಯಾಗಿದೆ.



