ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಜೀವ ಕಾಡಾನೆ ದಾಳಿಗೆ ಬಲಿಯಾಗಿದೆ. ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕರೊಬ್ಬರು ಸಾವಪ್ಪಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಘಟನೆ ಜರುಗಿದೆ. ಯಲ್ಲಪ್ಪ (45) ಮೃತ ದುರ್ದೈವಿ. ಯಲ್ಲಪ್ಪ ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ತಿರುವಳ್ಳಿ ಮೂಲದವರು.
ಸೋಮವಾರ ಬೆಳಿಗ್ಗೆ ತೋಟದ ಲೈನ್ ಮನೆಯ ಸಮೀಪವೇ ಕಾಡಾನೆ ದಾಳಿ ಮಾಡಿದ್ದು ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬಾಳೆಹೊನ್ನೂರು ಅರಣ್ಯ ಇಲಾಖೆ ಎದುರು ಪ್ರತಿಭಟನೆ
ಕಾಡಾನೆ ದಾಳಿಯಿಂದ ಕಾರ್ಮಿಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ಅರಣ್ಯ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಯಿತು.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಬಾಳೆಹೊನ್ನೂರು ಆರ್.ಎಫ್.ಓ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಡಿ.ಎಫ್.ಓ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ, ಬಾಳೆಹೊನ್ನೂರು ಹಾಗೂ ನರಸಿಂಹರಾಜಪುರ ಭಾಗಕ್ಕೆ ಒಂದೊಂದು ಶಾಶ್ವತ ಇಟಿಎಫ್ ತುಕಡಿ ನಿಯೋಜನೆ ಮಾಡಿರುವುದಾಗಿ ತಿಳಿಸಿದರು.

ಎರಡು ಆನೆ ಹಿಡಿಯಲು ಪ್ರಸ್ತಾವನೆ ಅರಣ್ಯ ಭವನದ ಹಂತದಲ್ಲಿ ಇದ್ದು ಶೀಘ್ರವಾಗಿ ಆನೆ ಹಿಡಿಯಲಾಗುವುದು ಎಂದರು. ಪರಿಹಾರದ ಮೊತ್ತ 20 ಲಕ್ಷವನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ಅನಿವಾರ್ಯ ಕಾರಣದಿಂದ ಜಿಲ್ಲಾಧಿಕಾರಿ ಆಗಮಿಸದಿದ್ದುದಕ್ಕೆ, ಹೆಚ್ಚುವರಿ ಇಟಿಎಫ್ ತುಕಡಿ ಹಾಗೂ ಆನೆ ಬೇಲಿ ಬೇಡಿಕೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಧಿಕಾರಿ ಗಳೊಂದಿಗೆ ಮಾತನಾಡಿದಾಗ ಜಿಲ್ಲಾಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು.
ಎರಡು ವಾರದೊಳಗೆ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ಹಾಗೂ ಅರಣ್ಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಬಾಳೆಹೊನ್ನೂರು ಭಾಗದಲ್ಲಿ ಜನಸ್ಪಂದನ ಸಭೆಯನ್ನು ಆಯೋಜನೆ ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.



