ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್, ತೋಟಗಾರಿಕಾ ಕಾಲೇಜಿನ ಎದುರು ಹಾಸನ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಕಸದ ರಾಶಿ ಬಿದ್ದಿದ್ದು, ತಿಂಗಳಾನುಗಟ್ಟಲೇ ಅಲ್ಲಿ ಬಿದ್ದಿರುವ ಕಸದ ರಾಶಿಯಿಂದ ದುರ್ವಾಸನೆ ಬರುತ್ತಿದೆ. ಕಸ ಕೊಳೆತು ನಾರುತ್ತಿದ್ದು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ವಾಹನ ಸವಾರರು ಮೂಗನ್ನು ಮುಚ್ಚಿಕೊಂಡು ರಸ್ತೆಯಲ್ಲಿ ತಿರುಗುವಂತ ಪರಿಸ್ಥಿತಿ ಎದುರಾಗಿದೆ. ರಸ್ತೆ ಪಕ್ಕದಲ್ಲಿಯೇ ತೋಟಗಾರಿಕಾ ಕಾಲೇಜು ವಿದ್ಯಾರ್ಥಿ ನಿಲಯವಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಈ ಕಸದ ರಾಶಿಯಿಂದ ಕಿರಿಕಿರಿಯಾಗುತ್ತಿದ್ದು, ಹಾಸ್ಟೆಲ್ ನ ಕಿಟಕಿ ತೆರೆದರೆ ದುರ್ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಆತಂಕದಲ್ಲಿದ್ದಾರೆ.
ತಕ್ಷಣ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಈ ಕಸದ ರಾಶಿಯನ್ನು ತೆರವುಗೊಳಿಸಲು ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾಗೆಯೇ ಹಳೇ ಮೂಡಿಗೆರೆ ಗ್ರಾಮ ಪಂಚಾಯತಿ ಸಮೀಪದಲ್ಲಿರುವ ಐಸಿರಿ ಲೇಔಟ್ ಗೆ ಗ್ರಾಮ ಪಂಚಾಯತಿಯ ಕಸದ ಗಾಡಿ ಬಾರದೇ 15 ದಿನಗಳು ಕಳೆದಿದ್ದು ಇದರ ಬಗ್ಗೆ ಅಲ್ಲಿ ವಾಸಿಸುವ ಸಾರ್ವಜನಿಕರು ಅಧಿಕಾರಿಗಳನ್ನು ಕೇಳಿದರೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇನ್ನೆರಡು ದಿನದಲ್ಲಿ ಕಸದ ವಾಹನ ಬಾರದೇ ಇದ್ದಲ್ಲಿ ತಮ್ಮ ಮನೆಗಳ ಕಸವನ್ನು ಗ್ರಾಮಪಂಚಾಯತಿಯ ಮುಂದೆ ಸುರಿದು ವಿನೂತನ ರೀತಿಯ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ನಿವಾಸಿ ಕಾಂತರಾಜು ಮತ್ತಿತರರು ಮಾಹಿತಿ ನೀಡಿದ್ದಾರೆ.



