ಸರಕಾರದಿಂದ ಸಾಗುವಳಿ ಪತ್ರ ಪಡೆದ ನಮ್ಮ ಭೂಮಿಯನ್ನು ಏಕಾಏಕಿ ಕಡತ ಪೈಫಲ್ಯ ಹೊಂದಿದ ಪಟ್ಟಿಯಲ್ಲಿ ಸೇರಿಸಲಾಗಿದೆ. ಈಗಾಗಲೇ ಕೆಲವರ ಹೆಸರನ್ನು ಪಹಣಿಯಲ್ಲಿ ವಜಾ ಗೊಳಿಸಿರುವುದು ಆತಂಕ ತಂದಿದೆ ಎಂದು ರೈತ ಪೂರ್ಣೇಶ್ ಕುಂದೂರು ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಜಮೀನಿನಲ್ಲಿ ಪೂರ್ವಜರ ಹಾಗೂ ಸ್ವತಂತ್ರ ಪೂರ್ವದಿಂದಲೂ ಬೆಳೆ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಕ್ರಮವಾಗಿ ಸರಕಾರಕ್ಕೆ ದಾಖಲೆ ನೀಡಿ, ಕಿಮ್ಮತ್ತು ಕಟ್ಟಿ, ಸರಕಾರದಿಂದ ಸಾಗುವಳಿ ಪತ್ರ ಪಡೆದ ನಮ್ಮ ಭೂಮಿಯನ್ನು ಏಕಾಏಕಿ ಕಡತ ಪೈಫಲ್ಯ ಹೊಂದಿದ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಕೆಲವರ ಹೆಸರನ್ನು ಪಹಣಿಯಲ್ಲಿ ವಜಾಗೊಳಿಸಲಾಗಿದೆ. ಇದು ಸರಿಯಲ್ಲ. ಈ ಸಮಸ್ಯೆ ಪರಿಹಾರಿಸಿಕೊಳ್ಳಲು ರೈತ ಹಿತ ರಕ್ಷಣಾ ವೇದಿಕೆ ಮುಂದೆ ಬಂದಿರುವುದು ನಮ್ಮ ಪಾಲಿಗೆ ಬೆಳಕು ಬಂದಂತಾಗಿದೆ ಎಂದು ಹೇಳಿದರು.
ಸಂತ್ರಸ್ತ ರೈತ ಮಹಿಳೆ ಪುಟ್ಟಮ್ಮ ದೇವವೃಂದ ಮಾತನಾಡಿ, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹೆಚ್ಚಾಗಿ ಈ ಸಮಸ್ಯೆಯಲ್ಲಿ ಸಿಲುಕಿದ್ದೇವೆ. ನಮ್ಮಂತಹ ಸಣ್ಣ ರೈತರನ್ನು ಕೆಲವರು ಭೂಗಳ್ಳರೆಂದು ಬಿಂಬಿಸುತ್ತಿರುವುದು ಖಂಡನೀಯ. ಭೂಗಳ್ಳರೆಂದು ಹೇಳುತ್ತಿರುವವರೂ ಕೂಡ 50/53 ಭೂಮಿ ಮಾಡಿಕೊಂಡಿದ್ದಾರೆ. ನಾಳೆ ಅವರ ಭೂಮಿಗೂ ಕಂಟಕ ಬಂದರೆ ಅವರನ್ನು ಕೂಡ ಭೂಗಳ್ಳರೆಂದು ಕರೆಯುವುದು ಸರಿಯೇ ಎಂದು ಪ್ರಶ್ನಿಸಿದರು.
ಡಿ.ಎಸ್.ಬಾಬು ದೇವವೃಂದ ಮಾತನಾಡಿ, ರೈತರೆಲ್ಲಾ ಒಗ್ಗೂಡಿಕೊಂಡು ತಮ್ಮ ಭೂಮಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಸಂದರ್ಭದಲ್ಲಿ, ರೈತರ ಸಮಾವೇಶದ ಬಗ್ಗೆ ಕುಹಕವಾಗಿ ಮಾತನಾಡಿರುವುದು ಖಂಡನೀಯ, ಅಲ್ಲಿ ರಾಜಕಾರಣಿಗಳನ್ನು ಕೂರಿಸಿ ಕಾಟಾಚಾರಕ್ಕೆ ಸಭೆ ನಡೆಸಿಲ್ಲ. ಶಾಸಕಾಂಗ ಮತ್ತು ಕಾರ್ಯಾಂಗ ಮಾಡಿರುವ ತಪ್ಪಿಗೆ ನ್ಯಾಯಾಲಯ ಮದ್ಯಂತರ ತಡೆಯಾಜ್ಞೆ ನೀಡಿರುವುದನ್ನು ಗಮನಿಸದೇ, ಜವಾಬ್ದಾರಿ ಇರುವ ಯಾವುದೇ ಪಕ್ಷದ ಮುಖಂಡರು ಇಂತಹ ರೈತ ವಿರೋಧಿ ಹೇಳಿಕೆ ನೀಡುವುದಿಲ್ಲ. ನಮ್ಮ ಭೂಮಿ ನಮ್ಮ ಹಕ್ಕು. ನಾವು ಭೂಗಳ್ಳರಲ್ಲ ಭೂಮಿಪುತ್ರರೆಂಬುದು ಅರ್ಥ ಮಾಡಿಕೊಳ್ಳಬೇಕು. ನಾವು ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ಸಾಗುವಳಿ ಮಾಡಿದ್ದು, ನಮಗೆ ಮಂಜೂರಾಗಿದ್ದ ಭೂಮಿಗೆ ಈಗ ಕಂಟಕ ಎದುರಾಗಿದ್ದ, ಮುಂದಿನ ದಾರಿ ತಿಳಿಯದಾಗಿದೆ ಎಂದು ಹೇಳಿದರು.



