ಜಾತಿ ಮತಗಳಿಗಿಂತ ದೇಶ ಮೊದಲು ಎಂದು ಡಾ.ಬಿ.ರ್.ಅಂಬೇಡ್ಕರ್ ಹೇಳಿದ ಹಾಗೆ ಅವರ ತತ್ವವನ್ನೇ ಬಿಜೆಪಿ ನೈಜವಾಗಿ ಅಳವಡಿಸಿಕೊಂಡು ಪಾಲಿಸುತ್ತಿದೆ. ಎಂದು ಕೊಳ್ಳೆಗಾಲ ಮಾಜಿ ಶಾಸಕ, ಬಿಜೆಪಿ ಮುಖಂಡ ಎನ್.ಮಹೇಶ್ ಹೇಳಿದರು.
ಅವರು ಶುಕ್ರವಾರ ಸಂಜೆ ಮೂಡಿಗೆರೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಎಸ್ಸೀ ಮೋರ್ಚದ ವತಿಯಿಂದ ಏರ್ಪಡಿಸಿದ್ದ 135ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಹದಲ್ಲಿ ಉಸಿರಿರೋವರೆಗೆ ಈ ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಜಾತಿ ಮತವನ್ನು ದೇಶಕ್ಕಿಂತ ಮೇಲಿಡುವ ಕೆಲಸ ಮಾಡಿದರೆ ಸ್ವಾತಂತ್ರ ಮತ್ತೊಮ್ಮೆ ಕಳೆದುಕೊಳ್ಳುವ ಸ್ಥಿತಿ ಬರುತ್ತದೆ. ಹಾಗಾಗಿ ಈ ಘಟನಾವಳಿ ಸಂಭವಿಸದಂತೆ ಎಲ್ಲರೂ ಸಮಾನತೆ ಹಾದಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಅಂಬೇಡ್ಕರ್ ಅವರು ನಿಧನರಾದಾಗ ಅಂತ್ಯಕ್ರಿಯೆ ನಡೆಸಲು ಜಾಗ ಕೊಡದವರು ಈಗ ಸಂವಿಧಾನ ಉಳಿಸಿ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರನ್ನು ಸಂಸ್ಕಾರ ಮಾಡಿದ ಸ್ಥಳ ಪುಣ್ಯ ಭೂಮಿ ಎಂದು ಘೋಷಿಸಿತು. ಅಲ್ಲದೇ ಅವರ ಮನೆ ಹಾಗೂ ಶಿಕ್ಷಣ ಪಡೆದ ಪಂಚ ಸ್ಥಳವನ್ನು ಪಂಚತೀರ್ಥವನ್ನಾಗಿ ಮಾಡಿ, ಮುಂದಿನ ಜನಾಂಗ ಶಾಶ್ವತವಾಗಿ ನೆನೆಪಿಟ್ಟುಕೊಳ್ಳುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಾವು ಇಂದಿನಿಂದಲೇ ಸಂಕಲ್ಪ ಮಾಡಬೇಕು. ಅಂಬೇಡ್ಕರ್ ಒಂದು ಜಾತಿಯ ನಾಯಕನಲ್ಲ. ಅವರು ರಾಷ್ಟ್ರಪುರಷ. ಅವರ ಆಶಯ ಪಾಲಿಸಬೇಕೆಂದರೆ ನಾವು ಅಸ್ಪøಶ್ಯತೆಗೆ ಅವಕಾಶ ಕೊಡದೇ ಜಾತಿ ಎಂಬ ಪಿಡುಗು ತೊಲಗಿಸಿದಾಗ ಮಾತ್ರ ಅಂಬೇಡ್ಕರ್ ಆಶಯಕ್ಕೆ ಬೆಲೆ ಸಿಗುತ್ತದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಎಸ್ಸೀ ಮೋರ್ಚದ ಅಧ್ಯಕ್ಷ ಸಚಿನ್ ವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಮುಖಂಡರಾದ ಹಳಸೆ ಶಿವಣ್ಣ, ದಿನೇಶ್ ದೇವವೃಂದ, ಎಂ.ಆರ್.ಜಗದಿಶ್, ಜೆ.ಎಸ್.ರಘು, ದೀಪಕ್ ದೊಡ್ಡಯ್ಯ, ಕಲ್ಲೇಶ್ ಮಾಕೋನಹಳ್ಳಿ, ಮನೋಜ್ ಹಳೆಕೋಟೆ, ಕೆ.ಸಿ.ರತನ್, ಭರತ್ ಬಾಳೂರು, ಪಂಚಾಕ್ಷರಿ, ರವಿ ಆಲ್ದೂರು, ವೆಂಕಟೇಶ್ ಕುರುವಂಗಿ, ಎಂ.ಎಸ್.ಸುಜಿತ್ ಮತ್ತಿತರರಿದ್ದರು.



