ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮದ ಮಂಜುನಾಥ್ ಎಂಬುವವರ ಮನೆಯಲ್ಲಿ ಚಿನ್ನಾಭರಣವನ್ನು ದೋಚಿದ್ದ ಆರೋಪಿಯನ್ನು 72 ಗಂಟೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಜುನಾಥ್ರವರ ಮನೆಯಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದ ಅಪರಿಚಿತ ವ್ಯಕ್ತಿಯು ಮನೆಯಲ್ಲಿ ಯಾರು ಇಲ್ಲದಿದ್ದಾಗ ಒಟ್ಟು 86 ಗ್ರಾಂ ತೂಕದ ಮಾಂಗಲ್ಯ ಸರ, ಎರಡು ಕೈ ಬಳೆ, ಒಂದು ಬ್ರಾಸ್ ಲೇಟ್ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರಕರಣ ಭೇದಿಸಲು ವಿಶೇಷ ತಂಡವನ್ನು ನಿಯೋಜಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಡಾ. ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಉಪ ಅಧೀಕ್ಷಕ ನಾಗರಾಜ್ ಕೆಆರ್, ಮಾರ್ಗದರ್ಶನದಲ್ಲಿ, ರಚಿಸಿದ್ದ ಆಲ್ದೂರು ವೃತ್ತ ನಿರೀಕ್ಷಕ ಪಿಪಿ ಸೋಮೇಗೌಡ ನೇತೃತ್ವದ ಪೊಲೀಸ್ ತಂಡ ಪ್ರಕರಣವನ್ನು 72 ಗಂಟೆಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದು, ಕಳ್ಳತನ ವಾಗಿದ್ದ 12 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಂಡಿದೆ.
ಪತ್ರಿಕೆಯೊಂದಿಗೆ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಸೋಮೇಗೌಡ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಅಪರಿಚಿತ ವ್ಯಕ್ತಿಯಾಗಿದ್ದು, ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟಗಳಿಗೆ ಮತ್ತು ಮನೆ ಕೆಲಸಗಳಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಕಾರ್ಮಿಕನ ಪೂರ್ವಪರ ದಾಖಲೆಗಳನ್ನು ಸಂಗ್ರಹಿಸಿ ಪೊಲೀಸ್ ಠಾಣೆ ಮೂಲಕ ವ್ಯಕ್ತಿಯ ದಾಖಲಾತಿ ಮಾಹಿತಿಗಳನ್ನು ಖಚಿತಪಡಿಸಿಕೊಂಡ ಬಳಿಕ ನೇಮಿಸಿಕೊಳ್ಳುವುದು ಉತ್ತಮ ಈಗಾಗಲೇ ಅಪರಿಚಿತ ವ್ಯಕ್ತಿಗಳನ್ನು ಕೆಲಸಗಳಿಗೆ ನಿಯೋಜಿಸಿಕೊಳ್ಳುವಾಗ ಯಾವ ರೀತಿಯಲ್ಲಿ ಮುಂಜಾಗ್ರತ ಕ್ರಮಗಳನ್ನು ವಹಿಸಬೇಕೆಂದು ಸಾಕಷ್ಟು ಬಾರಿ ಪತ್ರಿಕೆ ಮಾಧ್ಯಮಗಳಲ್ಲಿ ವಿಷಯ ಪ್ರಕಟಿಸಲಾಗಿದ್ದು ಇಲಾಖೆ ವತಿಯಿಂದಲೂ ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಪುನಹ ಪುನಹ ಇಂತಹ ಪ್ರಕರಣಗಳು ಮರುಕಳಿಸುತ್ತಿದ್ದು, ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಪೋಲಿನ ಕಾರ್ಯಾಚರಣೆ ತಂಡದಲ್ಲಿ ಪಿಎಸ್ಐಗಳಾದ ಮೂರ್ತಪ್ಪ,ರವಿ ಜಿಎ, ಸಿಬ್ಬಂದಿಗಳಾದ ಚೇತನ್ ಕುಮಾರ್, ವಸಂತ್ ಕುಮಾರ್, ಪ್ರಸನ್ನ ಕುಮಾರ್, ತನ್ವೀರ್, ಚೇತನ್ ಬಿ ಎಲ್ ಮನು ಇದ್ದರು.



