ರೈತರು ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಮಣ್ಣು, ನೀರು ಹಾಗೂ ಅರಣ್ಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಸುಸ್ಥಿರ ಕೃಷಿಯತ್ತ ಹೆಜ್ಜೆ ಇಡಬೇಕು ಎಂದು ಜೀ ಹೊಸಹಳ್ಳಿಯಲ್ಲಿ ಬುಧುವಾರ ನೆಡೆದ ರೈತರ ತರಬೇತಿ ಕಾರ್ಯಕ್ರಮದಲ್ಲಿ ತಜ್ಞರು ಕರೆ ನೀಡಿದರು.
ಮೂಡಿಗೆರೆ ತಾಲೂಕಿನ ಜಿ. ಹೊಸಹಳ್ಳಿಯಲ್ಲಿ ರೈತ ಉತ್ಪಾದಕರ ಸಹಕಾರ ಸಂಘ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ “ಜೀವವೈವಿಧ್ಯ ನಿರ್ವಹಣೆ ಮತ್ತು ಅರಣ್ಯ ಸಂರಕ್ಷಣಾ ಕುರಿತ ಸಾಮರ್ಥ್ಯ ವರ್ಧನ” ಹಾಗೂ ನೆಸ್ಲೆ ಕಾಫಿ ಬೆಳೆಗಾರರ ವಿಜ್ಞಾನ ಸಂಕಿರಣ ಮತ್ತು ಪುನರ್ಜೀವನ ಕೃಷಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ. ಪೂರ್ಣೇಶ್ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಉಮಾಮಹೇಶ್ವರ್ , ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ನಿರ್ದೇಶಕ ಎ.ಟಿ. ಕೃಷ್ಣಮೂರ್ತಿ, ಸೆಗಲ್ ಫೌಂಡೇಶನ್ ವ್ಯವಸ್ಥಾಪಕ ಸುಮಂತ್ ಹಾಗೂ ನೆಸ್ಲೆ ಕಾಫಿಯ ತಾಲೂಕು ಅಧಿಕಾರಿ ಶಿವಕುಮಾರ್ ಅವರು ರೈತರಿಗೆ ವೈಜ್ಞಾನಿಕ ಕೃಷಿ, ಜೀವವೈವಿಧ್ಯ ಸಂರಕ್ಷಣೆ ಹಾಗೂ ಪುನರ್ಜೀವನ ಕೃಷಿಯ ಮಹತ್ವದ ಕುರಿತು ಮಾಹಿತಿ ನೀಡಿದರು.
ತರಬೇತಿಯಲ್ಲಿ ಜೀವಾಮೃತ ತಯಾರಿಕೆ, ಜೈವಿಕ ಗೊಬ್ಬರಗಳ ಬಳಕೆ, ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಕಳೆನಾಶಕಗಳ ಸಮರ್ಪಕ ಬಳಕೆ, ಹವಾಮಾನಕ್ಕೆ ಅನುಗುಣವಾದ ಕೃಷಿ ಪದ್ಧತಿಗಳು, ಪರ್ಯಾಯ ಬೆಳೆಗಳ ಆಯ್ಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾವಯವ ಕೃಷಿ, ಹೈನುಗಾರಿಕೆ, ಕುರಿ, ಕೋಳಿ, ಹಂದಿ ಹಾಗೂ ಮೀನು ಸಾಕಾಣಿಕೆ, ತೋಟಗಾರಿಕೆ ಮತ್ತು ವಿವಿಧ ತರಕಾರಿ ಬೆಳೆಗಳ ವೈಜ್ಞಾನಿಕ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ರೈತ ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಪಿ. ಶಂಕರ್, ಎಚ್.ಆರ್. ಯೋಗೇಶ್, ಎಚ್.ಜಿ. ಭರತ್, ಎಚ್.ಎಸ್. ರಂಜಿತ್, ಎಚ್.ಹೆಚ್. ದಯಾನಂದ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶೃಷ್ಟಿ ಹಾಗೂ ಜಿ. ಹೊಸಹಳ್ಳಿ, ಹಿರೇಶಿಗೀರ, ಚಿಂಟೆಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.


