ಮೂಡಿಗೆರೆ ತಾಲೂಕಿನ ಕುಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಕುಂದೂರು ಗ್ರಾ.ಪಂ.2026-27ನೇ ಸಾಲಿನ ಗ್ರಾಮಸಭೆಗೆ ಕಂದಾಯ, ಜೆಜೆಎಂ, ಪಿಡಬ್ಲೂಡಿ, ಅರಣ್ಯ, ಪಿಆರ್ಡಿ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಖಂಡಿಸಿ, ಕಂದೂರು ಗ್ರಾಮಸ್ಥರು ಗ್ರಾಮಸಭೆಯನ್ನು ಬಹಿಷ್ಕರಿಸಿದ ಹಿನ್ನಲೆಯಲ್ಲಿ ಗ್ರಾಮಸಭೆ ರದ್ದುಗೊಳಿಸಲಾಯಿತು.
ಕುಂದೂರು ಗ್ರಾ.ಪಂ. ವ್ಯಾಪ್ತಯ ದರ್ಶನ, ಕುಂದೂರು, ಹೆಬ್ಬಳಗದೆ, ಕಾರ್ಲಗದ್ದೆ, ತಳವಾರ ಹುಲ್ಲೆಮನೆ, ಎಸ್ಟೇಟ್ ಕುಂದೂರು, ಕುಂಡ್ರ ಗ್ರಾಮ ಸೇರಿದಂತೆ ಬಹುತೇಕ ಗ್ರಾಮದಲ್ಲಿ ಅನೇಕ ಮಂದಿ ವಸತಿ ವಂಚಿತರಿದ್ದಾರೆ. ಮನೆ ಕಟ್ಟಿಕೊಳ್ಳುವವರು 94ಸಿ ಹಕ್ಕುಪತ್ರಕ್ಕಾಗಿ, ರೈತರು ಭೂಹಕ್ಕು ಪಡೆಯುವಲ್ಲಿ ರೋಸಿಹೋಗಿದ್ದಾರೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿದ್ದರೂ, ಮುಂದಿನ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಮಳೆಯಿಲ್ಲದೇ ಜಲ ಮೂಲ ಬತ್ತಿಹೋಗಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ಕಾಡಾನೆ, ಕಾಡುಪ್ರಾಣಿಗಳು ಸತತವಾಗಿ ರೈತರ ಜಮೀನುಗಳಿಗೆ ದಾಳಿಯಿಡುತ್ತಿವೆ. ತಳವಾರ, ಹೆಬ್ಬಳಗದ್ದೆ ಸೇರಿದಂತೆ ಕೆಲವೆಡೆ ಮಾತ್ರ ಐಬೆಕ್ಸ್ ವಿದ್ಯುತ್ ಬೇಲಿ ಅಳವಡಿಸಿದ್ದು, ಅದರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಮತ್ತೊಂದು ಭಾಗದಿಂದ ಕಾಡು ಪ್ರಾಣಿಗಳು ಲಗ್ಗೆಯಿಟ್ಟು ಸತತವಾಗಿ ದಾಳಿ ಮಾಡುತ್ತಿವೆ. ಇಂತಹ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮಸಭೆಗೆ ಅಧಿಕಾರಿಗಳೇ ಭಾಗವಹಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಇಲಾಖೆ ಅಧಿಕಾರಿಗಳಿಲ್ಲದೇ ಕಾಟಾಚಾರಕ್ಕೆ ಸಭೆ ನಡೆಸುವುದರಿಂದ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಹಾಗಾಗಿ ಗೈರು ಹಾಜರಾದ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಒತ್ತಾಯಿಸಿದ ಅವರು, ಮುಂದಿನ ದಿನ ನಡೆಯುವ ಗ್ರಾಮಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಸಮಸ್ಯೆ ಆಲಿಸಬೇಕು. ಇಲ್ಲವಾದರೆ ಗಾಮಸಭೆಗೆ ಆಗಮಿಸದ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಗರ್, ರವಿಗೌಡ, ಮಹೇಶ್, ಸತೀಶ್, ಮಂಜುನಾಥ್ಆಚಾರಿ, ಪುಟ್ಟಣ್ಣ, ಸಂತೋಷ್, ಅನಿಲ್, ಪವನ್, ಬೊಮ್ಮಯ್ಯ, ರಂಜಿತ್ ಮತ್ತಿತರರಿದ್ದರು.


