ಕಳಸ ತಾಲ್ಲೂಕು ಸಂಸೆ ಗ್ರಾಮದ ಬಸರೀಕಲ್ಲು ಪ್ರದೇಶದಲ್ಲಿ ಭಾನುವಾರ ಸುರಿದ ನಿರಂತರ ಮಳೆಯ ಪರಿಣಾಮ ಇಲ್ಲಿಯ ಬೆಳ್ಳ ಗ್ರಾಮದ ಕೃಷ್ಣಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಭೂಕುಸಿತ ವುಂಟಾಗಿ ಲಕ್ಷಾಂತರ ರೂ ನಷ್ಟವಾಗಿದ್ದು, ಭೂಕುಸಿತದಿಂದಾಗಿ ಬಡ ಕುಟುಂಬ ಒಂದು ಎಕರೆಗೂ ಹೆಚ್ಚು ಕಾಫಿ, ಅಡಿಕೆ ತೋಟವನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.
ಭಾನುವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಕೃಷ್ಣಪ್ಪ ದಂಪತಿ ತೋಟದಲ್ಲಿ ಇದ್ದಾಗಲೇ ಕಲ್ಲುಗಳು ಉರುಳಲಾರಂಭಿಸಿದೆ. ಆಗ ಅಪಾಯ ಅರಿತ ದಂಪತಿ ಅಲ್ಲಿಂದ ಓಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಸುಮಾರು 1 ಎಕರೆಯಷ್ಟು ತೋಟ ಭೂಕುಸಿತದಿಂದ ಜರಿದು ಬಿದ್ದಿದೆ.
ಭೂಕುಸಿತದಿಂದಾಗಿ ನೂರಾರು ಕಾಫಿ, ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿ ಗಿಡಗಳು ನಾಶವಾಗಿದೆ. 2 ಎಕರೆ ಕೃಷಿ ಭೂಮಿ ಹೊಂದಿರುವ ಈ ಕುಟುಂಬದ ಅರ್ಧದಷ್ಟು ಭೂಮಿ ಮಣ್ಣುಪಾಲು ಆಗಿರುವುದರಿಂದ ಕುಟುಂಬ ಕಂಗಾಲಾಗಿದೆ.
ನಾವು 40 ವರ್ಷದಿಂದ ಸಾಕಿದ್ದ ಕಾಫಿ, ಅಡಿಕೆ ಗಿಡಗಳೆಲ್ಲ ಮಣ್ಣಿನ ಒಳಗೆ ಹೂತುಹೋಗಿವೆ. ನಮಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ ಎಂದು ಕೃಷಿಕ ಕೃಷ್ಣಪ್ಪ ದುಃಖದಿಂದ ಹೇಳುತ್ತಾರೆ.
ಜರಿದಿರುವ ಒಂದು ಎಕರೆ ತೋಟದಲ್ಲಿ ಒಳ್ಳೆ ಅಡಿಕೆ, ಕಾಫಿ ಫಸಲು ಇತ್ತು. ತೋಟದಲ್ಲೀ ಈಗಲೂ ಮಣ್ಣು ಜರಿಯುತ್ತಿದೆ. ನಮಗೆ ಸರ್ಕಾರ ಪರಿಹಾರ ಕೊಡಬೇಕು. ನೆನ್ನೆ ನಮ್ಮ ಜೀವ ಉಳಿದಿದ್ದೇ ಅದೃಷ್ಟ ಎಂದು ಕೃಷ್ಣಪ್ಪ ಅವರ ಪತ್ನಿ ಸುಶೀಲಾ ಕಣ್ಣೀರು ಹಾಕಿ ತಮ್ಮ ಸಂಕಷ್ಟವನ್ನು ಹೇಳುತ್ತಿದ್ದಾರೆ.
ಬಡತನದಲ್ಲಿರುವ ಕುಟುಂಬ ಕಷ್ಟ ಪಟ್ಟು ಜೀವನ ಮಾಡುತ್ತಿದ್ದರು.ಇದ್ದ ಅತ್ಯಲ್ಪ ಜಮೀನು ಕೂಡ ಈಗ ಮಣ್ಣು ಪಾಲಾಗಿ ಹೋಗಿದೆ. ಸರ್ಕಾರ ಈ ಕುಟುಂಬಕ್ಕೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಕೂಡ ಆಗ್ರಹಿಸಿದ್ದಾರೆ.


