ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಕಾಫಿ ತೋಟದಲ್ಲಿ ನೆಲೆಸಿದ್ದ ಐವರು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್, ಮಹಮದ್ ಹಸೀಬುಲ್ ಬಂಧಿತರು.
ಜಿಲ್ಲೆಯಲ್ಲಿ ಎಸ್ಟೇಟ್ಗಳು, ರೆಸಾರ್ಟ್ ಮತ್ತು ಹೋಂಸ್ಟೇಗಳು ಹೆಚ್ಚು ಇರುವುದರಿಂದ ಕೆಲಸಕ್ಕೆ ಬಂದವರ ದಾಖಲೆಗಳನ್ನು ಪೊಲೀಸರು ಎಲ್ಲೆಡೆ ಪರಿಶೀಲಿಸುತ್ತಿದ್ದಾರೆ. ಬಣಕಲ್ ಠಾಣೆ ವ್ಯಾಪ್ತಿಯ ತೋಟವೊಂದರಲ್ಲಿ ದಾಖಲೆ ಸಂಗ್ರಹಿಸುವ ವೇಳೆ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ.
‘ಅವರನ್ನು ವಿಚಾರಣೆ ಮಾಡಿದಾಗ ಬಾಂಗ್ಲಾ ದೇಶದ ಗುರುತಿನ ಚೀಟಿ ಸಿಕ್ಕಿದೆ. ಕೆಲವರು ಕುಟುಂಬ ಸಮೇತ ಬಂದಿದ್ದಾರೆ. ಇಲ್ಲಿಗೆ ಹೇಗೆ ಬಂದರು, ಕರೆ ತಂದ ಏಜೆಂಟರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ತಿಳಿಸಿದರು.
ಮಲೆನಾಡಿನ ಕಾಫಿ ತೋಟಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳಿದ್ದಾರೆ, ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಹಿಂದಿನಿಂದಲೂ ಬಿಜೆಪಿ ಭಜರಂಗದಳ ಕಾರ್ಯಕರ್ತರು ಆರೋಪ ಮಾಡಿದ್ದರು. ಇದೀಗ ಕೇಂದ್ರ ಗುಪ್ತಚರ ಮಾಹಿತಿ ಹಿನ್ನೆಲೆ ಆರೋಪಗಳಿಗೆ ಪುಷ್ಠಿ ನೀಡಿದಂತಾಗಿದೆ. ಪೊಲೀಸರು ಅಲರ್ಟ್ ಆಗಿದ್ದು ಇನ್ನಷ್ಟು ಅಕ್ರಮ ಬಾಂಗ್ಲಾದೇಶಿಯರ ಪತ್ತೆ ಮುಂದಾಗಿದ್ದಾರೆ.


