ರಾಷ್ಟ್ರದ ದಲಿತ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿದ ನಡೆಯನ್ನು ಖಂಡಿಸಿ ದಸಂಸ ಮುಖಂಡರುಗಳು ಮಂಗಳವಾರ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಭೀಮಯ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಸಂವಿಧಾನದತ್ತ ಲೋಕಸಭಾ ಮೇಲ್ಮನೆಯ ವಿರೋಧ ಪಕ್ಷದ ನಾಯಕರು ಸಾರ್ವಜನಿಕ ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿರುವುದು ಅಮಾನವೀಯ ಕಾರ್ಯ ಎಂದು ಆರೋಪಿಸಿದರು.
ದೇಶದ ಓರ್ವ ಅಪ್ರತಿಮ ದಲಿತ ನಾಯಕ ಅಸೃಶ್ಯನೆಂದು ಬಿಂಬಿಸಿ, ಭಾಷಣ ಸ್ಥಳವನ್ನು ಮನುವಾದಿಗಳು ಸ್ವಚ್ಚಗೊಳಿಸಿ ದೊಡ್ಡ ಅಪರಾಧ ಮಾಡಿದ್ದಾರೆ. ದೇಶದಲ್ಲಿ ಸಂವಿಧಾನಕ್ಕೆ ಒಳಗಾಗಿರುವ ಯಾವುದೇ ಜಾತಿ, ಧರ್ಮದವರು ಭಾರತೀಯ ಪ್ರಜೆಗಳೇ. ಆದರೆ ಕೆಲವು ಮನುವಾದಿಗಳು ಹೀನಾಕೃತ್ಯ ಎಸಗಿರುವುದು ಸರಿಯಲ್ಲ ಎಂದರು.
ರಾಷ್ಟ್ರದ ಮೂಲ ನಿವಾಸಿಗಳು ದಲಿತರು. ಈ ನೆಲ, ಜಲ ಹಾಗೂ ಭೂಮಿಯಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಕೆಲವು ಕೋಮುವಾದಿ, ಮನುವಾದಿಗಳು ದೇಶದ ಮೂಲ ನಿವಾಸಿಗಳಿಗೆ ಅವಮಾನಿಸಿರು ವ ಕೆಲಸ ಮಾಡಿದ್ದು ಕೂಡಲೇ ಇವರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ರೀತಿಯ ಹೀನಾಯ ಕೃತ್ಯ ನಡೆಯದಂತೆ ಸರ್ಕಾರವು ಸೂಕ್ತ ಎಚ್ಚರ ವಹಿಸಬೇಕು. ಭಾಷಣದ ಸ್ಥಳವನ್ನು ಸ್ವಚ್ಚಗೊಳಿಸಿರುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ದಸಂಸ ಮುಖಂಡರುಗಳು ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಎದ್ದೇಳು ಕರ್ನಾಟಕದ ಜಿಲ್ಲಾಧ್ಯಕ್ಷ ಗಣೇಶ್, ದಸಂಸ ಮುಖಂಡರುಗಳಾದ ಎಂ.ಎಸ್. ಮಂಜುನಾಥ್, ಪುಟ್ಟಸ್ವಾಮಿ, ದಿವಾಕರ್, ಶಿವರಾಜ್, ಶಿವಕುಮಾರ್, ಸವಿತಾ ಮುಂತಾದವರಿದ್ದರು.


