ಈ ದೇಶ ಕಂಡ ಹಿರಿಯ ರಾಜಕಾರಣಿ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉತ್ತರ ಪ್ರದೇಶದಲ್ಲಿ ಅವಮಾನಿಸಿರುವುದು ಮನುಕುಲಕ್ಕೆ ಮಾಡಿರುವ ಅಪಮಾನ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಸ್ಟ್ 8 ರಂದು ಉತ್ತರ ಪ್ರದೇಶದ ರಾಮಲಾಲ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ದಲಿತ ಸಮಾಜದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು 2 ದಿನದ ಬಳಿಕ ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಯ ಸಮಿತಿ ಎಂಬ ಸಂಘಟನೆ ಆ ಸ್ಥಳವನ್ನು ಹಸುವಿನ ಗಂಜಲ, ಸಗಣಿ ಹಾಕಿ ಶುದ್ದಿಕರಣ ಮಾಡಿ ಹೋಮ ಮಾಡಿದ್ದಾರೆ.
ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಅಸ್ಪøಶ್ಯತೆ ಇನ್ನು ಸಮಾಜದಲ್ಲಿ ತಂಡಾವವಾಡುತ್ತಿರುವುದು ಬೇಸರದ ಸಂಗತಿ. ಈ ನಾಡಿನಲ್ಲಿ ಸಮಾನತೆಗಾಗಿ ಹೋರಾಡಿದ ಬುದ್ಧ, ಬಸವಣ್ಣ, ಕನಕದಾಸ, ಕುವೆಂಪು, ಹಿಂದೂ ಸ್ವಾಮಿ ವಿವೇಕಾನಂದ, ನಾರಾಯಣಗುರು ಪೆರಿಯಾರ್ ನಂತಹ ಹುಟ್ಟಿನ ನಾಡಿನಲ್ಲಿ ಜಾತಿ ವ್ಯವಸ್ಥೆ ಮರುಕಳಿಸುತ್ತಿರುವುದು ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ ಎಂದು, ಇನ್ನೂ ಎಷ್ಟು ಎಂದು ದಲಿತರು ಈ ಅವಮಾನವನ್ನು ಸಹಿಸಿಕೊಳ್ಳುವುದು ಎಂದು ಅವರು ಭಾವುಕರಾಗಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.
ಈ ರೀತಿ ಪ್ರತಿ ಸಂದರ್ಭದಲ್ಲೂ ನಮ್ಮ ಸಮಾಜವನ್ನು ಶೋಷಣೆ ಮಾಡುವುದನ್ನು ಗಮನಿಸಿದರೆ ನಾವು ಹಿಂದೂ ಧರ್ಮದಲ್ಲಿ ಹುಟ್ಟಿರುವುದೇ ತಪ್ಪಾ? ರಾಮನ ಹೆಸರಿನಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ನಮ್ಮನ್ನು ಅವಮಾನಿಸಿದರೆ ರಾಮನನ್ನೇ ಅವಮಾನಿಸಿದ ಹಾಗೆ. ಕೂಡಲೇ ಖರ್ಗೆ ಅವರಿಗೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಮತ್ತು ವರ್ಗ ಹಿತರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಆಗಸ್ಟ್ 28ರಂದು ಎಲ್ಲಾ ಪಕ್ಷ ಹಾಗೂ ಸಂಘಟನೆಗೊಂದಿಗೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಜ್ಞಾವಂತರು, ನಾಗರಿಕರು ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ವರ್ಗ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಎಂ.ದೇಜಪ್ಪ, ಕಾರ್ಯದರ್ಶಿ ಕೆ.ಕೆ.ರಾಮಯ್ಯ, ಜಿ.ಪಂ. ಮಾಜಿ ಸದಸ್ಯ ಎಂ.ಎಸ್.ಅನಂತ್, ಬಿಎಸ್ಪಿ ಮುಖಂಡ ಬಿ.ಎಂ. ಶಂಕರ್, ನಿವೃತ ಶಿಕ್ಷಕ ಹಾಲಯ್ಯ ಉಪಸ್ಥಿತರಿದ್ದರು.


