ಸಾಂದರ್ಭಿಕ ಚಿತ್ರ
ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ಎಸ್ಟೇಟ್ವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ರಾಜುಕುಮಾರ್, ಅಸ್ಸಾಂ ಮೂಲದ ಮೋಹಿನ್, ತೋಮಸೇರ್, ಜುಮಾರ್ ಆಲಿ ಹಾಗೂ ಅನ್ವರ್ ಹುಸೇನ್ ಎಂದು ಗುರುತಿಸಲಾಗಿದೆ.
ಕಳೆದ ಶುಕ್ರವಾರ ಬಾಳೆಹೊಳೆ ಗ್ರಾಮದ ಮೀನು ಮಾರುಕಟ್ಟೆ ಸಮೀಪದ ಸಿಂಧುವಳ್ಳಿ ಹಳ್ಳದ ಪಕ್ಕದಲ್ಲಿ ದನದ ಮಾಂಸ, ಮೂಳೆಗಳು, ಕಾಲು, ಕೊಂಬು ಹಾಗೂ ಚರ್ಮ ಪತ್ತೆಯಾಗಿತ್ತು.
ಬಾಳೆಹೊಳೆ ಕಡೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಸಿಂಧುವಳ್ಳಿ ಹಳ್ಳದ ಬಳಿ ಕೆಲವರು ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿದ್ದರು. ಅನುಮಾನಗೊಂಡು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚೀಲವೊಂದರಲ್ಲಿ ದನದ ಮಾಂಸ ಹಾಗೂ ಮೂಳೆಗಳು ಕಂಡುಬಂದಿದ್ದವು. ಸ್ಥಳದಲ್ಲಿದ್ದ ವ್ಯಕ್ತಿಗಳು ದೂರುದಾರರನ್ನು ಕಂಡ ಕೂಡಲೇ ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಘಟನೆಯ ಕುರಿತು ಅವರು ಕಳಸ ಪೊಲೀಸರಿಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಲಭ್ಯವಾದ ಮಾಹಿತಿ ಹಾಗೂ ಸುಳಿವುಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದರು. ತನಿಖೆಯ ವೇಳೆ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಸೋಮವಾರ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಬಾಳೆಹೊಳೆ ಭಾಗದ ಸ್ಥಳೀಯ ಎಸ್ಟೇಟ್ವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನುವಾರುಗಳನ್ನು ಎಲ್ಲಿಂದ ತರಲಾಗಿತ್ತು, ಹಾಗೂ ಮಾಂಸವನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಕಳಸ ಠಾಣೆಯ ಪಿಎಸ್ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಶಿವಕುಮಾರ್, ರಾಜು ವಡ್ಡರ್, ಸುನೀಲ್ ಕುಮಾರ್ ಮತ್ತು ಕಾಶಿನಾಥ್ ಭಾಗವಹಿಸಿದ್ದರು


