ಕಾಫಿ ಕೃಷಿಯಲ್ಲಿ ಮಹಿಳೆಯರನ್ನು ತೊಡಗಿಸಿ ಸ್ವಾವಲಂಭಿಗಳನ್ನಾಗಿಸುವುದು ಮಹಿಳಾ ಕೃಷಿ ಉತ್ಪಾದನಾ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಂಸ್ಥೆ ಅಧ್ಯಕ್ಷೆ ಶೋಭಾ ನಾರಾಯಣ್ ಹೇಳಿದರು.
ಅವರು ಸೋಮವಾರ ಮೂಡಿಗೆರೆ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಏರ್ಪಡಿಸಿದ್ದ ನಿರ್ದೇಶಕರ ಸಭೆಯಲ್ಲಿ ಮಾತನಾಡಿದರು. ನಮ್ಮ ಸಂಸ್ಥೆಯಲ್ಲಿ 130ಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನು ಈಗಾಗಲೆ ಹೊಂದಿದ್ದು, ಸದಸ್ಯರ ಕುಟುಂಬದಲ್ಲಿ ಬೆಳೆಯುವ ಬೆಳೆ, ಕಾಫಿ ಸಂಸ್ಕರಣೆ ವ್ಯಾಪಾರ ಮತ್ತು ತೋಟದ ನಿರ್ವಹಣೆಯನ್ನು ತಿಳಿಸಿಕೊಡುವುದಲ್ಲದೆ ಇಲ್ಲಿನ ಕಾಫಿ, ಕಾಳು ಮೆಣಸಿಗೆ ಜಾಗತಿಕ ಮುನ್ನಡೆ ಮತ್ತು ಬ್ರಾಂಡ್ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಲ್ಲದೇ ಸಂಸ್ಥೆಯು ಕಾಫಿ, ಕಾಳು ಮೆಣಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಯನ್ನು ಬೆಳೆಯಲು ನರ್ಸರಿ ಗಿಡಗಳು, ಗೊಬ್ಬರ, ಕೃಷಿ ಸಲಕರಣೆ ನೀಡುವ ಉದ್ದೇಶ ಹೊಂದಲಾಗಿದ್ದು, ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಉಪಾಧ್ಯಕ್ಷೆ ಸರೋಜಾ ಸುರೇಂದ್ರ ಮಾತನಾಡಿ, ನಮ್ಮ ಸದಸ್ಯರು ಅಂತರಾಷ್ಟ್ರೀಯ ನಿಯಮದಂತೆ, ವ್ಯಾಪಾರ ಕೈಗೊಳ್ಳಲು ತೋಟಕ್ಕೆ ಸುಸ್ಥಿರ ಭೂಮಿ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅದನ್ನು ಸಂಸ್ಥೆ ವತಿಯಿಂದ ಮಾಡಿಕೊಡಲಾಗುವುದು. ಹಾಗಾಗಿ ಸದಸ್ಯರೆಲ್ಲರೂ ಪ್ರಮಾಣ ಪತ್ರ ಪಡೆದು, ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ಮನವಿ ಮಾಡಿದರು.
ಸಂಸ್ಥೆಯ ಸಿಇಓ ಕೀರ್ತಿ ಕಿರಣ್ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.


