ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಕೃತಿ ಸೇರಿದಂತೆ ಅವರ ಬಹುತೇಕ ಕೃತಿಗಳು ಜೀವ ಜಗತ್ತಿನ ಬಗ್ಗೆ ಬೆರಗು ಮೂಡಿಸಿ ಪರಿಸರದೊಂದಿಗೆ ಅನ್ಯೋನ್ಯತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸಾಹಿತಿ, ರಂಗಕರ್ಮಿ ಡಿ.ಎಂ.ಮಂಜುನಾಥಸ್ವಾಮಿ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದ ಡಿಎಸ್ಬಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ತೇಜಸ್ವಿ ಸಾಹಿತ್ಯ ಯಾನ-ಯುವ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣ ಸಿಗುವ ಕೀಟ, ಪಕ್ಷಿ, ಸಸ್ಯ ಮುಂತಾದ ಜೀವ ಜಗತ್ತಿನ ಕೌತುಕಗಳನ್ನು ತಮ್ಮ ವಿಶಿಷ್ಠ ಬರಹದ ಮೂಲಕ ಕಟ್ಟಿಕೊಡುವ ತೇಜಸ್ವಿ ಅವರು ಕುತೂಹಲ ಮತ್ತು ಬೆರಗಿನಿಂದ ಪರಿಸರವನ್ನು ನೋಡುವುದಕ್ಕೆ ಪ್ರೇರಣೆಯಾಗಿದ್ದಾರೆಂದು ಹೇಳಿದರು.
ನಾವ್ಯಾರು ಗಮನಿಸದೇ ಹೋದ ಕೀಟ ಜಗತ್ತಿನ ವಿಸ್ಮಯಕರ ಸಂಗತಿಗಳನ್ನು ಹೇಳುತ್ತಲ್ಲೇ ಕೀಟಪ್ರಪಂಚದ ಅದ್ಬುತ ಜಗತ್ತನ್ನು ನಮ್ಮೆದುರು ತೆರೆದಿಟ್ಟಿದ್ದಾರೆ. ಮಕ್ಕಳು, ಯುವಪೀಳಿಗೆಗೆ ಇಂತಹ ಕೃತಿಗಳು ತಲುಪುವ ಅಗತ್ಯವಿದೆ. ತೇಜಸ್ವಿ ಅವರ ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ತೇಜಸ್ವಿ ಸಾಹಿತ್ಯಯಾನದಂತಹ ಕಾರ್ಯಕ್ರಮಗಳನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಮ್ಮಿಕೊಂಡಿರುವುದು ಅತ್ಯಂತ ಅರ್ಥಪೂರ್ಣ ಎಂದರು.
ಡಿಎಸ್ಬಿಜಿ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಡಾ.ಅಪೂರ್ವ ಮಾತನಾಡಿ, ಮೂಡಿಗೆರೆಯ ಜನಜೀವನ, ಪರಿಸರ ತೇಜಸ್ವಿ ಅವರ ಕೃತಿಗಳಲ್ಲಿ ವಿಶಿಷ್ಠವಾಗಿ ದಾಖಲಾಗಿದ್ದು ಸಾಮಾನ್ಯರ ಬದುಕಿನ ವಿಶಿಷ್ಠ ಸಂಗತಿಗಳು ತೇಜಸ್ವಿ ಅವರ ಕೃತಿಗಳಲ್ಲಿ ಕಾಣ ಸಿಗುತ್ತವೆ ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ರಂಗಸ್ವಾಮಿ ಮಾತನಾಡಿ, ಯುವಪೀಳಿಗೆಗೆ ಪ್ರಕೃತಿ ಮತ್ತು ಪರಿಸರದೊಂದಿಗೆ ಅನ್ಯೋನ್ಯತೆಯನ್ನು ಬೆಳೆಸುವಲ್ಲಿ, ಪರಿಸರ ಜಾಗೃತಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ತೇಜಸ್ವಿ ಅವರ ಕೃತಿಗಳು ಮಹತ್ವದ ಪಾತ್ರ ವಹಿಸಿವೆ ಎಂದರು.
ಮಾಯಾಲೋಕ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಗೆ ಬದುಕಿನ ಬಗೆ ಕಿರುಪುಸ್ತಕ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿಎಸ್ಬಿಜಿ ಕಾಲೇಜಿನ ಕನ್ನಡ ಉಪನ್ಯಾಸಕ ಶಿವರುದ್ರ, ಡಾ.ನಾಗೇಶ್, ಸಾಹಿತಿ ಹಳೇಕೋಟೆ ರಮೇಶ್, ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್, ಗಾಯಕ ಬಕ್ಕಿ ಮಂಜುನಾಥ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ ಮತ್ತಿತರರಿದ್ದರು.
ನಿರಂತರ ಸುದ್ದಿ ಸಮಾಚಾರಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak



